ನವದೆಹಲಿಯ ವಸಂತ್ಕುಂಜ್ ಪ್ರದೇಶದಲ್ಲಿರುವ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನ ಆವರಣ –ಪಿಟಿಐ ಚಿತ್ರ
ನವದೆಹಲಿ: ‘ಸ್ವಘೋಷಿತ ದೇವಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅವರ ವಸತಿಗೃಹಕ್ಕೆ ತಡರಾತ್ರಿ ವೇಳೆ ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಭೇಟಿ ನೀಡುವಂತೆ ಒತ್ತಾಯಿಸುತ್ತಿದ್ದರು’ ಎಂದು ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ನ ವಿದ್ಯಾರ್ಥಿನಿಯರು ದಾಖಲಿಸಿದ ಎಫ್ಐಆರ್ನಲ್ಲಿ ವಿವರಿಸಲಾಗಿದೆ.
ಸ್ವಾಮೀಜಿಯಿಂದ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಕುರಿತು ಆಡಳಿತ ಮಂಡಳಿಯು ವರ್ಚುವಲ್ ಸಂವಾದ ನಡೆಸಿದ ವೇಳೆ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ನೋವು ತೋಡಿಕೊಂಡ ಬೆನ್ನಲ್ಲೇ ದೂರು ದಾಖಲಿಸಿದೆ.
‘ಲೈಂಗಿಕವಾಗಿ ಸಹಕರಿಸದಿದ್ದರೆ, ಕಾಲೇಜಿನಿಂದ ಅಮಾನತು ಹಾಗೂ ಪದವಿಯನ್ನು ತಡೆಹಿಡಿಯಲಾಗುವುದು ಎಂದು ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಬೆದರಿಕೆ ಹಾಕಿದ್ದರು’ ಎಂದು ಎಫ್ಐಆರ್ ಉಲ್ಲೇಖಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಿದ್ಯಾರ್ಥಿನಿಯರು ಆರ್ಥಿಕವಾಗಿ ತೀವ್ರ ಹಿಂದುಳಿದವರಾಗಿದ್ದು, ತಡರಾತ್ರಿ ವೇಳೆ ಸ್ವಾಮೀಜಿಯ ವಸತಿಗೃಹಕ್ಕೆ ತೆರಳಬೇಕಿತ್ತು. ವಿದ್ಯಾರ್ಥಿನಿಯೊಬ್ಬಳ ಅವಳ ಇಚ್ಛೆಗೆ ವಿರುದ್ಧವಾಗಿ ಹೆಸರು ಬದಲಾಯಿಸಲು ಬಲವಂತಪಡಿಸಲಾಗಿತ್ತು. ಸಾಕ್ಷಿಗಳನ್ನು ನಾಶಪಡಿಸುವ ಉದ್ದೇಶದಿಂದ ಮೊಬೈಲ್ನಲ್ಲಿದ್ದ ಸಂದೇಶಗಳನ್ನು ಅಳಿಸಲು ಒತ್ತಾಯಿಸಲಾಗಿತ್ತು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಸಂತ್ಕುಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ತನಿಖೆಗಾಗಿ ಹಲವು ತಂಡಗಳನ್ನು ರಚಿಸಲಾಗಿದೆ. ಆರೋಪಿಯು ವಿದೇಶಕ್ಕೆ ಪರಾರಿಯಾಗುವ ಶಂಕೆಯಿಂದ, ಆರೋಪಿಯ ವಿರುದ್ಧ ಈಗಾಗಲೇ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.