ADVERTISEMENT

ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಸಿರುವುದು ಸಂಘಟಿತ ಅಪರಾಧ: ನಾಯ್ಡು

ಪಿಟಿಐ
Published 24 ಫೆಬ್ರುವರಿ 2026, 15:54 IST
Last Updated 24 ಫೆಬ್ರುವರಿ 2026, 15:54 IST
   

ಅಮರಾವತಿ: ‘ಹಿಂದಿನ ವೈಎಸ್‌ಆರ್‌ಸಿಪಿ ಅವಧಿಯಲ್ಲಿ ಸುಮಾರು 60 ಲಕ್ಷ ಕೆ.ಜಿಯಷ್ಟು ಕಲಬೆರಕೆ ತುಪ್ಪ ಬಳಸಿ 20 ಕೋಟಿಗಿಂತಲೂ ಹೆಚ್ಚಿನ ಲಡ್ಡು ಪ್ರಸಾದ ತಯಾರಿಸಲಾಗಿದ್ದು, ಇದೊಂದು ಸಂಘಟಿತ ಅಪರಾಧ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹೇಳಿದರು. 

ಕಲಬೆರಕೆ ತುಪ್ಪಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ‘ಕಲಬೆರಕೆ ತುಪ್ಪದ ಹಿಂದಿನ ಅಪರಾಧಿಗಳ ಕೂಟವು ವೆಂಕಟೇಶ್ವರ ಸ್ವಾಮಿಯ ಪ್ರಸಾದವನ್ನೇ ಅಪವಿತ್ರಗೊಳಿಸಿದೆ’ ಎಂದು ಆರೋಪಿಸಿದರು. 

2019ರಿಂದ 2024ರ ಅವಧಿಯಲ್ಲಿ ಟಿಟಿಡಿಗೆ ಸುಮಾರು 59.71 ಲಕ್ಷ ಕೆ.ಜಿಯಷ್ಟು ಕಲಬೆರಕೆ ತುಪ್ಪ ಪೂರೈಕೆ ಆಗಿರುವುದು ಪರಿಶೀಲನೆಯಲ್ಲಿ ದೃಢಪಟ್ಟಿದೆ. ತಿರುಮಲ ತಿರುಪತಿ ದೇವಸ್ಥಾನದ ಆಡಳಿತದ ಜವಾಬ್ದಾರಿ ಹೊಂದಿರುವ ವ್ಯಕ್ತಿಯು ಕಲಬೆರಕೆ ತುಪ್ಪವನ್ನು ಸಂಗ್ರಹಿಸಿಟ್ಟುಕೊಳ್ಳಲು ಸುಮಾರು ₹234.51 ಕೋಟಿ ಖರ್ಚು ಮಾಡಿರುವ ಅಂಶವೂ ತನಿಖೆಯಲ್ಲಿ ಬಹಿರಂಗಗೊಂಡಿದೆ. ಅಪರಾಧಿಗಳು ಪ್ರಸಾದದ ಹೆಸರಿನಲ್ಲಿ ‘ಅಪವಿತ್ರ ಸಂಪ್ರದಾಯ’ವನ್ನೇ ಆರಂಭಿಸಿದ್ದರು ಎಂದರು.  

ADVERTISEMENT

‘ರಾಷ್ಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ನಡೆಸಿದ ಪರೀಕ್ಷೆಯಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸಿರುವುದು ಕಲಬೆರಕೆ ತುಪ್ಪ ಎನ್ನುವುದು ದೃಢಪಟ್ಟಿದೆ. ಈ ವರದಿ ಬಂದ ನಂತರವೇ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವಿದೆ ಎಂದು ಮಾತನಾಡಿದ್ದೇನೆ’ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.