ಅಮರಾವತಿ: ಇತ್ತೀಚೆಗೆ ಕೆಲವು ಪತ್ರಕರ್ತರು ಮತ್ತು ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ ಕೆ.ವಿ ರಾಜೇಂದ್ರನಾಥ ರೆಡ್ಡಿ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ವರಿಷ್ಠ ಎನ್. ಚಂದ್ರಬಾಬು ನಾಯ್ಡು ಪತ್ರ ಬರೆದಿದ್ದಾರೆ.
ಪತ್ರಕರ್ತರ ಮೇಲಿನ ಇತ್ತೀಚಿನ ಕೆಲವು ದಾಳಿ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ವೈಎಸ್ಆರ್ಸಿಪಿ ಮಾಧ್ಯಮಗಳ ವಿರುದ್ಧ ಸರಣಿ ದಾಳಿಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಪರಾಧಿಗಳನ್ನು ಕೂಡಲೇ ಬಂಧಿಸಿ ಹಾಗೂ ಅವರ ಹಿಂದಿರುವ ಸಂಚುಕೋರರನ್ನು ಶಿಕ್ಷಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ನಾಯ್ಡು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
'ನ್ಯೂಸ್ ಟುಡೇ' ಸಂಸ್ಥೆ ವೈಎಸ್ಆರ್ಸಿಪಿ ನಾಯಕರ ನೇತೃತ್ವದ ಮರಳು ಮಾಫಿಯಾವನ್ನು ಬಯಲಿಗೆಳೆದಿದ್ದಕ್ಕಾಗಿ ಫೆ. 14ರಂದು ಪಲ್ನಾಡು ಜಿಲ್ಲೆಯ ಅಮರಾವತಿ ಮಂಡಲದಲ್ಲಿ ದಾಳಿ ನಡೆಸಲಾಗಿದೆ ಎಂದು ಟಿಡಿಪಿ ಮುಖ್ಯಸ್ಥ ಟಿ. ಪರಮೇಶ್ವರ ರಾವ್ ಆರೋಪಿಸಿದ್ದಾರೆ.
ಅಲ್ಲದೇ ಇತ್ತೀಚೆಗೆ ತೆಲುಗು ಮಾಧ್ಯಮ ಸಂಸ್ಥೆ ಆಂಧ್ರಜ್ಯೋತಿ ಛಾಯಾಗ್ರಾಹಕ ಶ್ರೀ ಕೃಷ್ಣ ಅವರ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ ಎಂದೂ ಅವರು ಹೇಳಿದ್ದಾರೆ.
‘ಕರ್ನೂಲ್ನಲ್ಲಿರುವ ಈನಾಡು ಕಚೇರಿಯ ಮೇಲೆ ಮಂಗಳವಾರ ದಾಳಿ ನಡೆದಿದೆ. ಆಂಧ್ರ ಜ್ಯೋತಿ ಮತ್ತು ಟಿವಿ 5ನ ಛಾಯಾಗ್ರಾಹಕ ಮತ್ತು ಪತ್ರಕರ್ತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಗಂಭೀರ ಗಾಯಗಳಾಗಿವೆ. ಗುಂಪುಗಳ ನಡುವೆ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಸುಳ್ಳು ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ' ನಾಯ್ಡು ಪೊಲೀಸರಿಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.