ಬೆಂಗಳೂರು: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿರುವುದಕ್ಕೆ ಪುತ್ರ ನಾರಾ ಲೋಕೇಶ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರೊಬ್ಬರು ಮಹಾನ್ ವ್ಯಕ್ತಿತ್ವವುಳ್ಳ ವ್ಯಕ್ತಿ. ಜಗನ್ ಮೋಹನ್ ರೆಡ್ಡಿ ( ಆಂಧ್ರಪ್ರದೇಶದ ಪ್ರಸುತ್ತ ಸಿಎಂ) ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸುಳ್ಳು ಆರೋಪದಡಿ ಸಿಲುಕಿಸಿ , ಉದ್ದೇಶ ಪೂರ್ವಕವಾಗಿಯೇ ಜೈಲಿಗೆ ಹಾಕಿದರು.
ಅನೇಕ ರಾಜಕೀಯ ನಾಯಕರು ನನಗೆ ಕರೆ ಮಾಡಿ ನೈತಿಕ ಬೆಂಬಲ ನೀಡಿದ್ದಾರೆ. ನಿಮ್ಮ(ಜಗನ್) ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಹೇಳಬಹುದೇ? ವಿವೇಕಾನಂದ ಹತ್ಯೆ ಪ್ರಕರಣದಲ್ಲಿ ಕಡಪ ಸಂಸದ ಅವಿನಾಶ್ ರೆಡ್ಡಿ ನಿಮ್ಮನ್ನು ರಕ್ಷಿಸಿದ್ದು ಸುಳ್ಳೇ? ಎಂದು ಜಗನ್ ಅವರನ್ನು ನಾರಾ ಲೋಕೇಶ್ ಪ್ರಶ್ನಿಸಿದ್ದಾರೆ.
ಕೌಶಲ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದರು.
‘ಅಂದಾಜು ₹550 ಕೋಟಿ ಹಣ ದುರುಪಯೋಗ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಮತ್ತು ಟಿಡಿಪಿ ಫಲಾನುಭವಿಗಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ’ ಎಂದು ಆಂಧ್ರಪ್ರದೇಶದ ಸಿಐಡಿ ಎಡಿಜಿಪಿ ಎನ್. ಸಂಜಯ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
‘ಕಳೆದ 45 ವರ್ಷಗಳಿಂದ ನಾನು ತೆಲುಗು ಜನರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ತೆಲುಗು ಜನರ ಹಿತಾಸಕ್ತಿಯನ್ನು ಕಾಪಾಡಲು ಪ್ರಾಣ ತ್ಯಾಗಕ್ಕೂ ಸಿದ್ಧನಿದ್ದೇನೆ. ಇಲ್ಲಿನ ಜನರ ಸೇವೆ ಮಾಡುವುದನ್ನು ತಡೆಯಲು ಭೂಮಿಯ ಮೇಲಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ನನ್ನ ಆಂಧ್ರಪ್ರದೇಶ ನನ್ನ ತಾಯ್ನಾಡು’ ಎಂದು ಬಂಧನದ ಬಳಿಕ ಚಂದ್ರಬಾಬು ನಾಯ್ಡು ಅವರು ‘ಎಕ್ಸ್’(ಟ್ವಿಟರ್) ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಯಮ ಪಾಲಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಮತ್ತು ಜನರಿಗೆ ಅವರು ಮನವಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.