ADVERTISEMENT

ರಾಯಗಡ: ವಿದ್ಯುತ್ ಸ್ಥಾವರದಲ್ಲಿ ಟ್ಯಾಂಕ್ ಬಿದ್ದು 3 ಕಾರ್ಮಿಕರ ಸಾವು

ಪಿಟಿಐ
Published 12 ಸೆಪ್ಟೆಂಬರ್ 2021, 11:37 IST
Last Updated 12 ಸೆಪ್ಟೆಂಬರ್ 2021, 11:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಯಗಡ: ಛತ್ತೀಸಗಡದ ರಾಯಗಡ ಜಿಲ್ಲೆಯ ಖಾಸಗಿ ವಿದ್ಯುತ್ ಸ್ಥಾವರದಲ್ಲಿ ಭಾನುವಾರ ಹಾರುಬೂದಿಯನ್ನು ಸಾಗಿಸುತ್ತಿದ್ದ ಕಬ್ಬಿಣದ ಟ್ಯಾಂಕ್ ಆಕಸ್ಮಿಕವಾಗಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ರಾಜಧಾನಿ ರಾಯಪುರದಿಂದ 240 ಕಿ.ಮೀ. ದೂರದ ಟೆಮ್ಟೆಮಾ ಪ್ರದೇಶದಲ್ಲಿರುವ ಸ್ಕೈ ಅಲಾಯ್ಸ್ ಮತ್ತು ಪವರ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾವರದಲ್ಲಿ ಅವಘಡ ಸಂಭವಿಸಿದೆ ಎಂದು ಖರ್ಷಿಯಾ ಸ್ಟೇಷನ್ ಹೌಸ್ ಅಧಿಕಾರಿ ಎಸ್.ಆರ್.ಸಾಹು ತಿಳಿಸಿದ್ದಾರೆ.

'ಮಧ್ಯಾಹ್ನ 12ರ ಸುಮಾರಿಗೆ ಕಬ್ಬಿಣದ ಟ್ಯಾಂಕ್ ಆಕಸ್ಮಿಕವಾಗಿ ವಿದ್ಯುತ್‌ ತಯಾರಿಕಾ ಘಟಕದೊಳಗೆ ಮಧ್ಯಾಹ್ನ 12ರ ಸುಮಾರಿಗೆ ಕಬ್ಬಿಣದ ಟ್ಯಾಂಕ್ ಆಕಸ್ಮಿಕವಾಗಿ ಕಾರ್ಮಿಕರ ಮೇಲೆ ಬಿದ್ದಿದೆ. ಅವರು ವೆಲ್ಡಿಂಗ್ ಮತ್ತು ಗ್ಯಾಸ್ ಕಟಿಂಗ್‌ ಸಂಬಂಧಿತ ಕೆಲಸಗಳಲ್ಲಿ ತೊಡಗಿದ್ದರು, ಈ ವೇಳೆ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಸಂತ್ರಸ್ತರನ್ನು ಬಿಹಾರದ ನಿವಾಸಿಗಳಾದ ಮುನಿಲಾಲ್ ರಾಮ್ (40), ಬಸಂತ್ ಯಾದವ್ (30) ಮತ್ತು ರಾಯಗಡ ಜಿಲ್ಲೆಗೆ ಸೇರಿದ ಯಾದ್‌ರಾಮ್ ಸಾರ್ತಿ (25) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಒಬ್ಬರು ಬಿಹಾರದವರಾಗಿದ್ದರೆ, ಮತ್ತೋರ್ವ ಜಂಜಗೀರ್-ಚಂಪಾ ಜಿಲ್ಲೆಯವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿರುವ ಪೊಲೀಸರು ಘಟನೆಗೆ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.