ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್
(ಪಿಟಿಐ ಚಿತ್ರ)
ರಾಯ್ಪುರ: ಬುಡಕಟ್ಟು ಜನಾಂಗ ಮತ್ತು ಇತರರ ಧರ್ಮದವರ ಅಕ್ರಮ ಮತಾಂತರ ತಡೆಯಲು ಸರ್ಕಾರ ಹೊಸ ಕಠಿಣ ಕಾನೂನನ್ನು ಪರಿಚಯಿಸಲಿದೆ ಎಂದು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಭಾನುವಾರ ಹೇಳಿದ್ದಾರೆ.
ಮತಾಂತರಗೊಂಡರೆ ಪರಿಶಿಷ್ಟ ಪಂಗಡ ವರ್ಗದ ಪಟ್ಟಿಯಿಂದ ತೆಗೆದುಹಾಕುವ ಪ್ರಸ್ತಾವ ಇದೆ ಎಂದು ಹೇಳಿದ ಅವರು, ಇದು ಮತಾಂತರವನ್ನು ತಡೆಯುತ್ತದೆ ಎಂದು ಪ್ರತಿಪಾದಿಸಿದರು.
‘ಭಾರತ ಜಾತ್ಯತೀತ ದೇಶ. ಒಬ್ಬರ ಸ್ವಂತ ನಂಬಿಕೆ ಪ್ರಕಾರ ಯಾವುದೇ ಧರ್ಮವನ್ನು ಸ್ವೀಕರಿಸುವಲ್ಲಿ ಸಮಸ್ಯೆ ಇಲ್ಲ. ಆದರೆ ಕೆಲವರು ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ನೆಪದಲ್ಲಿ ಜನರನ್ನು, ವಿಶೇಷವಾಗಿ ಬಡವರನ್ನು ಆಮಿಷವೊಡ್ಡುವ ಮತ್ತು ದಾರಿತಪ್ಪಿಸುವ ಮೂಲಕ ಮತಾಂತರ ಮಾಡುತ್ತಿದ್ದಾರೆ. ಅದು ತಪ್ಪು. ಅದು ಆಗಬಾರದು. ಅವರನ್ನು ಪಟ್ಟಿಯಿಂದ ತೆಗೆದು ಹಾಕಿದರೆ ಮಾತಾಂತರ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ.
‘ಛತ್ತೀಸಗಢದಲ್ಲಿ ಧಾರ್ಮಿಕ ಅಕ್ರಮ ಮತಾಂತರದ ವಿರುದ್ಧ ಕಾನೂನು ಇದೆ. ಅದನ್ನು ಮತ್ತಷ್ಟು ಬಲಪಡಿಸುವ ಅವಶ್ಯಕತೆಯಿದೆ. ಇತರ ರಾಜ್ಯಗಳಲ್ಲಿ ಯಾವ ರೀತಿಯ ಕಾನೂನು ಇದೆ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ, ಧಾರ್ಮಿಕ ಮತಾಂತರವನ್ನು ನಿಲ್ಲಿಸಲು ನಾವು ಕಠಿಣ ಕಾನೂನನ್ನು ಪರಿಚಯಿಸುತ್ತೇವೆ’ ಎಂದು ಹೇಳಿದ್ದಾರೆ.
ಈ ಕಾನೂನನ್ನು ಯಾವಾಗ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಎಂದು ಅವರು ತಿಳಿಸಿಲ್ಲ.
ಹಲವಾರು ಬುಡಕಟ್ಟು ಸಮುದಾಯಗಳ ಪಟ್ಟಿಯಿಂದ ತೆಗೆದುಹಾಕುವ ಬೇಡಿಕೆಗೆ ಸಂಬಂಧಿಸಿದಂತೆ, ‘ಪರಿಶಿಷ್ಟ ಜಾತಿಯವರು ಇತರ ಧರ್ಮಕ್ಕೆ ಮತಾಂತರಗೊಂಡರೆ, ಅವರು ಸಂಬಂಧಪಟ್ಟ ವರ್ಗದ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳಿಂದ ವಂಚಿತರಾಗುತ್ತಾರೆ ಎಂದು ಸಂವಿಧಾನದಲ್ಲಿ ನಿಬಂಧನೆ ಇದೆ’ ಎಂದು ಅವರು ಹೇಳಿದ್ದಾರೆ
‘ಆದರೆ ಪರಿಶಿಷ್ಟ ಜಾತಿಯ ವಿಷಯದಲ್ಲಿ ಹಾಗಲ್ಲ. ಬುಡಕಟ್ಟು ಜನಾಂಗದವರು ಬೇರೆ ಧರ್ಮಕ್ಕೆ ಮತಾಂತರಗೊಂಡರೆ, ಅವರು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮತ್ತು ಮತಾಂತರಗೊಂಡ ಸಮುದಾಯಕ್ಕೆ ನೀಡಲಾಗುವ ಪ್ರಯೋಜನಗಳನ್ನು ಪಡೆಯುತ್ತಲೇ ಇರುತ್ತಾರೆ’ ಎಂದು ಅವರು ನುಡಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.