ಛತ್ತೀಸ್ಗಢ
ರಾಯಪುರ: ಛತ್ತೀಸ್ಗಢ ವಿಧಾನಸಭೆಯಲ್ಲಿ ರಸಗೊಬ್ಬರ ಪೂರೈಕೆ ವಿಚಾರದಲ್ಲಿ ಗದ್ದಲ ಮಾಡಿದ್ದರಿಂದ 30 ಕಾಂಗ್ರೆಸ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಉಮೇಶ್ ಪಟೇಲ್ ವಿಷಯ ಪ್ರಸ್ತಾಪಿಸಿ ರೈತರಿಗೆ ಡಿಎಪಿ ಗೊಬ್ಬರ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪ ಮಾಡಿದರು. ಇದಕ್ಕೆ ಕೃಷಿ ಸಚಿವರು ಉತ್ತರ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ಗದ್ದಲ ಉಟಾಯಿತು.
ಸದನಲ್ಲಿ ಗಲಾಟೆ ತೀವ್ರವಾದ್ದರಿಂದ ಸ್ಪೀಕರ್ ಸದನವನ್ನು ಒಂದು ಸಲ ಮುಂದೂಡಿದರು. ಮತ್ತೆ ಸದನ ಸೇರಿದ ಬಳಿಕ ಕಾಂಗ್ರೆಸ್ ಶಾಸಕರ ಸ್ಪೀಕರ್ ಸ್ಥಾನದ ಮುಂದೆ ಬಂದು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಪೀಕರ್ ಕಾಂಗ್ರೆಸ್ನ 30 ಶಾಸಕರನ್ನು ಸದನದಿಂದ ಒಂದು ದಿನದ ಮಟ್ಟಿಗೆ ಅಮಾನತು ಮಾಡಿದರು.
ಈ ಮುಂಗಾರು ಋತುವಿನಲ್ಲಿ, ರಾಜ್ಯಕ್ಕೆ ಕೇಂದ್ರದಿಂದ 3,10,000 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇಲ್ಲಿಯವರೆಗೂ 2,19,100 ಮೆಟ್ರಿಕ್ ಟನ್ ಗೊಬ್ಬರ ಪೂರೈಕೆಯಾಗಿದೆ. ಉಳಿಕೆ ಗೊಬ್ಬರ ಇನ್ನು ಪೂರೈಕೆಯಾಗದ ಕಾರಣ ಕೊರತೆಯಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಸರಿಯಾಗಲಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.
ಕೃಷಿ ಸಚಿವರ ಮಾಹಿತಿಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಶಾಸಕರು ಗದ್ದಲ ಮಾಡಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನಚಕಮಕಿ ನಡೆಯಿತು. ನಂತರ ಸ್ಪೀಕರ್ ಕಲಾಪವನ್ನು ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.