ರಾಯ್ಪುರ: ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ (74) ಅವರ ಆರೋಗ್ಯ ಸ್ಥಿತಿ ತೀರಾ ವಿಷಮಿಸಿದ್ದು, ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಶನಿವಾರ ರಾಯ್ಪುರದ ‘ಶ್ರೀ ನಾರಾಯಣ ಆಸ್ಪತ್ರೆ’ಗೆ ದಾಖಲಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ಕೋಮಾಗೆ ಜಾರಿದ್ದಾರೆ. ಅವರ ದೇಹವು ಔಷಧೋಪಚಾರಗಳಿಗೆ ಹೇಗೆ ಸ್ಪಂದಿಸುತ್ತಿದೆ ಎಂಬುದನ್ನು ಮುಂದಿನ 48 ಗಂಟೆಗಳ ಅವಧಿಯಲ್ಲಿ ಗಮನಿಸಲಾಗುವುದು ಎಂದು ರಾಯ್ಪುರದ ನಾರಾಯಣ ಆಸ್ಪತ್ರೆ ತಿಳಿಸಿದೆ.
‘ತಂದೆಯ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ. ಅವರಿಗೆ ಈಗ ಛತ್ತೀಸಗಡ ಜನತೆಯ ಪ್ರಾರ್ಥನೆ ಮತ್ತು ಶುಭ ಹಾರೈಕೆಯ ಅಗತ್ಯವಿದೆ’ ಎಂದು ಅವರ ಪುತ್ರ ಅಮಿತ್ ಜೋಗಿ ಹೇಳಿದ್ದಾರೆ.
ಅಜಿತ್ ಜೋಗಿ ಅವರು ಶನಿವಾರ ಮಧ್ಯಾಹ್ನ ಅಸ್ವಸ್ಥಗೊಂಡು ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
2004ರಲ್ಲಿ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಜೋಗಿ ಅವರು ಬಳಿಕ ಸದಾ ಗಾಲಿ ಕುರ್ಚಿಯನ್ನು ಅವಲಂಬಿಸಿದ್ದಾರೆ.
ಮೊದಲು ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಜೋಗಿ ಅವರು ಬಳಿಕ ರಾಜಕಾರಣದತ್ತ ಮುಖ ಮಾಡಿದವರು. 2000ನೇ ಇಸವಿಯಲ್ಲಿ ಮಧ್ಯಪ್ರದೇಶವನ್ನು ವಿಭಜಿಸಿ ಛತ್ತೀಸಗಡ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆಗ ಕಾಂಗ್ರೆಸ್ನಲ್ಲಿದ್ದ ಅಜಿತ್ ಜೋಗಿ ಮುಖ್ಯಮಂತ್ರಿಯಾದರು. ಛತ್ತೀಸಗಡದ ಮೊದಲ ಮುಖ್ಯಮಂತ್ರಿಯಾಗಿ ಅವರು 2000ನೇ ಇಸವಿಯ ನವೆಂಬರ್ನಿಂದ 2003ರ ನವೆಂಬರ್ ವರೆಗೆ ಕಾರ್ಯನಿರ್ವಹಿಸಿದ್ದಾರೆ.
2016ರಲ್ಲಿ ಕಾಂಗ್ರೆಸ್ ತ್ಯಜಿಸಿ ‘ಜನತಾ ಕಾಂಗ್ರೆಸ್ ಛತ್ತೀಸಗಡ(ಜೆ)’ ಪಕ್ಷ ಸ್ಥಾಪಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಸೆಣಸಿತ್ತು ‘ಜನತಾ ಕಾಂಗ್ರೆಸ್ ಛತ್ತೀಸಗಡ(ಜೆ)’. ಆದರೆ, ಕಾಂಗ್ರೆಸ್ ಗೆಲವು ಸಾಧಿಸಿ ಭೂಪೇಶ್ ಬಘೆಲ್ ಮುಖ್ಯಮಂತ್ರಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.