ADVERTISEMENT

ಛತ್ತೀಸ‌ಗಡ | ಶೌಚ ಗುಂಡಿಗೆ ಇಳಿದು ಸ್ಚಚ್ಛತಾ ಕಾರ್ಮಿಕ, ಒಂದೇ ಮನೆಯ ಮೂವರು ಸಾವು

ಏಜೆನ್ಸೀಸ್
Published 24 ಜೂನ್ 2020, 3:34 IST
Last Updated 24 ಜೂನ್ 2020, 3:34 IST
   

ಮುಂಗೇಲಿ (ಛತ್ತೀಸ‌ಗಡ): ಶೌಚ ಗುಂಡಿಯನ್ನು (ಸೆಪ್ಟಿಕ್‌ ಟ್ಯಾಂಕ್)‌ ಸರಿಯಾಗಿ ಸ್ವಚ್ಛಗೊಳಿಸಲಾಗಿದೆಯೇ ಎಂದು ನೋಡಲು ಇಳಿದ ಒಂದೇ ಮನೆಯ ಮೂವರುಹಾಗೂ ಅವರನ್ನು ರಕ್ಷಿಸಲು ಹೋದ ಸ್ಚಚ್ಛತಾ ಕಾರ್ಮಿಕ ಮೃತಪಟ್ಟಿರುವ ದುರಂತ ಛತ್ತೀಸಗಡದಲ್ಲಿ ನಡೆದಿದೆ.

ಸರ್ಗಾಂವ್‌ ಪಂಚಾಯಿತಿ ವ್ಯಾಪ್ತಿಯ ಮರ್ರಕೋನಾ ಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಮನೆಯಶೌಚ ಗುಂಡಿ ಸ್ಚಚ್ಛಗೊಳಿಸುವ ಸಲುವಾಗಿ ಮಾನಸ್‌ರಾಮ್‌ ಕೌಶಿಕ್‌ ಎನ್ನುವವರು ಕಾರ್ಮಿಕರನ್ನು ಬರಹೇಳಿದ್ದರು ಎಂದು ತಿಳಿದುಬಂದಿದೆ.

ಸ್ಚಚ್ಛಗೊಳಿಸಿದ ಬಳಿಕ ಸರಿಯಾಗಿ ಸ್ವಚ್ಛಗೊಳಿಸಲಾಗಿದೆಯೇ ಎಂದು ತಿಳಿಯುವ ಸಲುವಾಗಿ ಕೌಶಿಕ್‌ ಕುಟುಂಬದ ಒಬ್ಬರು ಗುಂಡಿಗೆ ಇಳಿದಿದ್ದರು. ಬಳಿಕ ಉಸಿರಾಟದ ಸಮಸ್ಯೆಯಾಗಿ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ನಂತರ ಅವರನ್ನು ಮೇಲಕ್ಕೆ ಕರೆತರಲು ಮನೆಯ ಇನ್ನಿಬ್ಬರು ಇಳಿದಿದ್ದರು. ಆದರೆ, ಅವರೂ ಮೇಲೆ ಬರಲಿಲ್ಲ. ನಂತರ ಸ್ವಚ್ಛತಾ ಕಾರ್ಮಿಕರೊಬ್ಬರು ಕೆಳಗಿಳಿದಿದ್ದರು. ಅವರೂ ಪ್ರಜ್ಞೆ ತಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಘಟನೆಯ ಬಳಿಕಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸದ್ಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮೃತರನ್ನು ಅಖಿಲೇಶ್ಚರ್‌ ಕೌಶಿಕ್‌ (40), ಗೌರಿಶಂಕರ್‌ ಕೌಶಿಕ್ (28), ರಾಮ್‌ಖಿಲವಾನ್‌ ಕೌಶಿಕ್‌ (45) ಮತ್ತು ಸ್ವಚ್ಛತಾ ಕಾರ್ಮಿಕ ಸುಭಾಷ್‌ ದಗೌರ್‌ (35) ಎಂದು ಗುರುತಿಸಲಾಗಿದೆ.

‘ಎಲ್ಲರೂ ಗುಂಡಿಯಲ್ಲಿ ವಿಷಾನಿಲ ಸೇವಿಸಿದ್ದರಿಂದ ಮೃತಪಟ್ಟಿದ್ದಾರೆ ಎನಿಸುತ್ತಿದೆ’ ಎಂದಿರುವ ಪೊಲೀಸ್‌ ಅಧಿಕಾರಿಯೊಬ್ಬರು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದಿದ್ದಾರೆ.

ಈ ಸಂಬಂಧಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಮರುಕ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.