ರಾಯಪುರ, ಛತ್ತೀಸಗಡ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೇಲರ್ ಹತ್ಯೆ ಖಂಡಿಸಿ ಶನಿವಾರ ಛತ್ತೀಸಗಡ ಬಂದ್ಗೆ ಕರೆ ನೀಡಿದ್ದವು. ಅಂಗಡಿಗಳು, ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದವು. ಅಗತ್ಯ ವಸ್ತುಗಳ ಸೇವೆಗೆ ಬಂದ್ನಿಂದ ವಿನಾಯಿತಿ ನೀಡಲಾಗಿತ್ತು.
ರಾಜಧಾನಿ ರಾಯಪುರ ಸೇರಿದಂತೆ ಹಲವೆಡೆ ಸಾರಿಗೆ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿತ್ತು. ಪೊಲೀಸರ ಪ್ರಕಾರ, ಬಂದ್ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಛತ್ತೀಸಗಡ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೇರಿ ಹಲವು ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದವು.
ಬೆದರಿಕೆ ಕರೆ: ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಕಾರಣ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ರಾಜಾ ಜಗತ್ ಹೆಸರಿನ ಯುವಕ ದೂರು ನೀಡಿದ್ದು, ಈ ಕುರಿತು ಎಫ್ಐಆರ್ ದಾಖಲಿಸಲಾಗಿದೆ ಎಂದು ದುರ್ಗ್ ಜಿಲ್ಲೆಯ ಪೊಲೀಸರು ತಿಳಿಸಿದ್ದಾರೆ.
‘ಜೂನ್ 12ರಂದು ಇನ್ಸ್ಟಾಗ್ರಾಂನಲ್ಲಿಪೋಸ್ಟ್ ಹಂಚಿಕೊಂಡಿದ್ದ. ಹಿಂದೆಯೇ ರಾಜಾ ಜಗತ್ ಅವರ ಎರಡು ಮೊಬೈಲ್ ಫೋನ್ಗಳಿಗೂ ಬೆದರಿಕೆ ಕರೆಗಳು ಬಂದಿವೆ’ ಎಂದು ದೂರು ಆಧರಿಸಿ ಪೊಲೀಸರು ತಿಳಿಸಿದರು. ‘ಬೆದರಿಕೆ ಕರೆ ಮಾಡಿದವರನ್ನು ರಾಯಪುರ ನಿವಾಸಿ ಕಾಸಿಫ್ ಎಂದು ದೂರುದಾರರು ಗುರುತಿಸಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.