ADVERTISEMENT

ಛೋಟಾ ರಾಜನ್‌ ಸೇರಿ 7 ಆರೋಪಿಗಳಿಗೆ ಕಠಿಣ ಸಜೆ

ಬಿಲ್ಡರ್‌ ಅಜಯ್‌ ಗೋಸಲಿಯ ಮೇಲೆ ಗುಂಡಿನ ದಾಳಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 11:45 IST
Last Updated 17 ಮಾರ್ಚ್ 2021, 11:45 IST
ಛೋಟಾ ರಾಜನ್‌
ಛೋಟಾ ರಾಜನ್‌   

ಮುಂಬೈ: ಬಿಲ್ಡರ್‌ ಅಜಯ್‌ ಗೋಸಲಿಯ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದ‌ಲ್ಲಿ ಭೂಗತ ಪಾತಕಿ ರಾಜೇಂದ್ರ ನಿಖಾಲ್ಜೆ ಅಲಿಯಾಸ್‌ ಛೋಟಾ ರಾಜನ್‌ ಮತ್ತು ಆತನ ಆರು ಮಂದಿ ಸಹಚರರಿಗೆ ಮುಂಬೈ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹5 ಲಕ್ಷ ದಂಡ ವಿಧಿಸಿದೆ.

ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧನಿಯಂತ್ರಣ ಕಾಯ್ದೆ (ಎಂಸಿಒಸಿಎ)ಯಡಿ ಪ್ರಕರಣ ದಾಖಲಾಗಿತ್ತು.

ಛೋಟಾ ರಾಜನ್ ಮತ್ತು ಆತನ ಗ್ಯಾಂಗ್ ಸದಸ್ಯರಾದ ಕೌಶಿಕ್ ರಾಜ್‌ಗೌರ್, ಅರವಿಂದ ಅಲಿಯಾಸ್ ಅರ್ನ್ಯಾ ಶಿಂಧೆ, ಸುನಿಲ್ ಕುಮಾರ್ ಅಲಿಯಾಸ್ ಪಿಯೂಷ್, ವಿಲಾಸ್ ಭಾರತಿ, ಪ್ರಕಾಶ್ ಅಲಿಯಾಸ್ ಪಾಕ್ಯ ಯಾನೆ ಭಾವು, ರೋಹಿತ್ ಅಲಿಯಾಸ್ ಸತೀಶ್‌ಗೆಮೋಕಾ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎ.ಟಿ. ವಾಂಖೆಡೆ ಮಂಗಳವಾರ ಶಿಕ್ಷೆ ವಿಧಿಸಿದ್ದಾರೆ.

ADVERTISEMENT

2012ರ ಆಗಸ್ಟ್ 28ರಂದು ಬಿಲ್ಡರ್ ಗೋಸಲಿಯ ಅವರು ಇನ್ಫಿನಿಟಿ ಮಾಲ್‌ನ ಗೇಟ್‌ನಿಂದ ನಿರ್ಗಮಿಸುವಾಗ ಅವರ ಮೇಲೆ ಮೂವರಿಂದ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಗೋಸಲಿಯ ಅವರ ಗಂಟಲು, ಭುಜ, ಹೊಟ್ಟೆ ಮತ್ತು ಅಂಗೈಗೆ ಗಾಯಗಳಾಗಿದ್ದವು. ಬಂಗೂರ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಪ್ರಕರಣ ಮೊದಲು ದಾಖಲಾಗಿತ್ತು. ಮಹಾರಾಷ್ಟ್ರ ಸರ್ಕಾರದ ಕೋರಿಕೆ ನಂತರ ಈ ಪ್ರಕರಣವನ್ನು ಅಪರಾಧ ವಿಭಾಗ ಸಿಐಡಿಗೆ ವರ್ಗಾಯಿಸಲಾಗಿತ್ತು. ನಂತರ ಮಹಾರಾಷ್ಟ್ರದ ಸರ್ಕಾರದ ಕೋರಿಕೆ ಮೇಲೆ ಈ ಪ್ರಕರಣವನ್ನು 2016ರ ಏಪ್ರಿಲ್ 7ರಂದು ಸಿಬಿಐಗೆ ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.