ADVERTISEMENT

ಬಿಜೆಪಿಯ ಮೌನ ನೋವುಂಟು ಮಾಡಿದೆ: ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್

ಪಿಟಿಐ
Published 22 ಜೂನ್ 2021, 16:00 IST
Last Updated 22 ಜೂನ್ 2021, 16:00 IST
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)   

ನವದೆಹಲಿ: ಬಿಜೆಪಿಯ ಮೌನವು ನೋವುಂಟುಮಾಡಿದೆ. ಆ ಪಕ್ಷದ ಜತೆಗಿನ ಬಾಂಧವ್ಯ ಏಕಮುಖವಾಗಿರಲು ಸಾಧ್ಯವಿಲ್ಲ ಎಂದು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

‘ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮನ್ನು ಮೂಲೆಗುಂಪಾಗಿಸಲು ಯತ್ನಿಸಿದರೆ ಭವಿಷ್ಯದಲ್ಲಿ ರಾಜಕೀಯದಲ್ಲಿ ಇಡಬೇಕಾದ ಹೆಜ್ಜೆಗಳ ಎಲ್ಲ ಸಾಧ್ಯತೆಗಳನ್ನು ಪರಿಗಣಿಸುವುದಾಗಿ ಹೇಳಿದ್ದಾರೆ.

ತಂದೆ ರಾಮ್‌ ವಿಲಾಸ್ ಪಾಸ್ವಾನ್ ಅವರು ಬಂಡೆಯಂತೆ ಅಚಲವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಜತೆ ನಿಂತಿದ್ದರು. ಆದರೆ ಈ ಸಂಕಷ್ಟದ ಸಂದರ್ಭದಲ್ಲಿ ಮಧ್ಯ‍ಪ್ರವೇಶವನ್ನು ಬಯಸಿದಾಗ ಕೇಸರಿ ಪಕ್ಷದ ಸುಳಿವೇ ಇಲ್ಲ ಎಂದು ಅವರು ಹೇಳಿದ್ದಾರೆ.

‘ಮೋದಿ ಮೇಲೆ ನಂಬಿಕೆ ಇದೆ. ಆದರೆ, ನಮ್ಮನ್ನು ತಳ್ಳಲು, ಮೂಲೆಗುಂಪಾಗಿಸಲು ಮತ್ತು ನಿರ್ಧಾರ ಕೈಗೊಳ್ಳುವಂತೆ ಮಾಡಲು ಯತ್ನಿಸಿದರೆ, ಪಕ್ಷವು ಎಲ್ಲ ಸಾಧ್ಯತೆಗಳನ್ನು ಪರಿಗಣಿಸಲಿದೆ. ತನ್ನ ರಾಜಕೀಯ ಭವಿಷ್ಯದ ಜತೆ ಯಾರಿದ್ದಾರೆ, ಯಾರಿಲ್ಲ ಎಂಬ ಆಧಾರದಲ್ಲಿ ಎಲ್‌ಜೆಪಿಯು ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪಕ್ಷದಲ್ಲಿ ಒಡಕಿಗೆ ಜೆಡಿ(ಯು) ಸಂಚು ಹೂಡಿದ್ದಾಗ ಬಿಜೆಪಿಯನ್ನು ಎಳೆದು ತರುವುದು ಸರಿಯಲ್ಲ ಎಂದೂ ಪಾಸ್ವಾನ್ ಹೇಳಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯು ನಿಮ್ಮನ್ನು ಸಂಪರ್ಕಿಸಿದೆಯೇ ಮತ್ತು ಪಕ್ಷದೊಳಗಣ ಒಡಕಿನಲ್ಲಿ ಕೇಸರಿ ಪಕ್ಷದ ಪಾತ್ರವಿದೆ ಎಂಬ ವದಂತಿಗಳ ಕುರಿತು ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

‘ಅವರು (ಬಿಜೆಪಿ) ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕಿತ್ತು. ಅವರ ಮೌನವು ನಮಗೆ ತೀವ್ರ ನೋವುಂಟು ಮಾಡಿದೆ’ ಎಂದಿದ್ದಾರೆ ಪಾಸ್ವಾನ್.

ಎನ್‌ಡಿಎ ಮೈತ್ರಿಕೂಟದ ಎಲ್‌ಜೆಪಿಯ ಆಂತರಿಕ ಬಿಕ್ಕಟ್ಟಿನಿಂದ ಬಿಜೆಪಿಯು ಅಂತರ ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.