ಜೈಪುರ/ನವದೆಹಲಿ: ತಾನು ಪ್ರಯಾಣಿಸಬೇಕಿದ್ದ ವಿಮಾನ ತಪ್ಪಿಸಿಕೊಂಡಿದ್ದಕ್ಕಾಗಿ ಅದರಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ ನೃತ್ಯ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೋಹಿತ್ಕುಮಾರ್ ಟೆಂಕ್ (24) ಹೀಗೆ ಹುಸಿ ಕರೆಮಾಡಿ ಪೊಲೀಸರ ಅತಿಥಿಯಾದ ನೃತ್ಯ ನಿರ್ದೇಶಕ.
ಟಿವಿ ಕಾರ್ಯಕ್ರಮ ವೊಂದರ ನೃತ್ಯನಿರ್ದೇಶಕನಾಗಿರುವ ಮೋಹಿತ್, ಜೈಪುರ–ಮುಂಬೈ ಇಂಡಿಗೊ ವಿಮಾನದಲ್ಲಿ (6E218) ಪ್ರಯಾಣಿಸಬೇಕಿತ್ತು.
‘ಮೋಹಿತ್ಕುಮಾರ್ ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ವಿಮಾನ ತೆರಳಿದ ಮೇಲೆ, ಹುಸಿಬಾಂಬ್ ಕರೆ ಮಾಡಿದ್ದ. ಆರೋಪಿಯನ್ನು ಪತ್ತೆ ಹಚ್ಚಿ ಸಂಗನೇರ್ ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ (ಸಿಐಎಸ್ಎಫ್) ಕಮಾಂಡಂಟ್ ವೈ.ಪಿ. ಸಿಂಗ್ ತಿಳಿಸಿದ್ದಾರೆ.
‘ವಿಮಾನ ಬೆಳಿಗ್ಗೆ 5ಕ್ಕೆ ಹೊರಡಬೇಕಿತ್ತು. ಆದರೆ, 4.52ಕ್ಕೆ ಹೊರಟಿದೆ. ಹಾಗಾಗಿ ನನಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ’ ಎಂದುಮೋಹಿತ್ಕುಮಾರ್ ಹೇಳಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.