ನವದೆಹಲಿ: ‘ಛತ್ತೀಸಗಡದಲ್ಲಿ ಆಮಿಷ ಹಾಗೂ ಬೆದರಿಕೆ ಮೂಲಕ ಆದಿವಾಸಿಗಳನ್ನು ಮತಾಂತರಗೊಳಿಸುತ್ತಿರುವ ಕ್ರೈಸ್ತ ಮಿಷನರಿಗಳು ನಕ್ಸಲರಿಗಿಂತ ಹೆಚ್ಚು ಅಪಾಯಕಾರಿ’ ಎಂದು ರಾಯಗಡದ ಬಿಜೆಪಿ ಸಂಸದೆ ಗೋಮತಿ ಸಾಯಿ ಶುಕ್ರವಾರ ಕಳವಳ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಅವರು ಧಾರ್ಮಿಕ ಮತಾಂತರ ಕುರಿತು ಪ್ರಸ್ತಾಪಿಸಿದರು.
ಕ್ರಿಶ್ಚಿಯನ್ ಮಿಷನರಿಗಳ ಚಟುವಟಿಕೆಗಳ ಕುರಿತು ಸುಕ್ಮಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ತಮ್ಮ ಅಧೀನ ಅಧಿಕಾರಿಗಳಿಗೆ ನೀಡಿರುವ ಮಾಹಿತಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಬಸ್ತಾರ್ ಮತ್ತು ಛತ್ತೀಸ್ಗಡದಲ್ಲಿ ಮತಾಂತರ ಪ್ರಕ್ರಿಯೆಯು ಅಪಾಯಕಾರಿ ಮಟ್ಟದಲ್ಲಿದೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.
ಬಸ್ತಾರ್ನಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ಮಟ್ಟ ಹಾಕಲು ಗೃಹ ಸಚಿವ ಅಮಿತ್ ಶಾ ಅವರು ಕೈಗೊಂಡಿರುವ ಕ್ರಮಗಳಿಗೆ ಕೃತಜ್ಞತೆ ಸಲ್ಲಿಸಿದ ಗೋಮತಿ ಅವರು, ಕೇಂದ್ರ ಪಡೆಗಳ ಒತ್ತಡದಿಂದಾಗಿ ನಕ್ಸಲರಿಗೆ ಹಿನ್ನಡೆಯಾಗುತ್ತಿದೆ. ಆದರೆ ಮತಾಂತರ ಮಾಡುತ್ತಿರುವ ಕ್ರೈಸ್ತ ಮಿಷನರಿಗಳು ನಕ್ಸಲರಿಗಿಂತ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿದ್ದಾರೆ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.