ಮಣಿಪುರಕ್ಕೆ ಭೇಟಿ ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿಯೋಗ
-ಪಿಟಿಐ ಚಿತ್ರ
ಇಂಫಾಲ್: ‘ಸಮುದಾಯದ ಜನರು ವಾಸಿಸುವ ಗ್ರಾಮಸ್ಥರಿಗೆ ಕಾನೂನಾತ್ಮಕವಾದ ರಕ್ಷಣೆ ಒದಗಿಸುವುದನ್ನು ಖಚಿತಪಡಿಸಬೇಕು’ ಎಂದು ಚುರಾಚಾಂದ್ಪುರ ಮೈತೇಯಿ ಸಂಘಟನೆಯ ಮುಖಂಡರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅದೇ ರೀತಿ, ಕುಕಿ ಬಹುಸಂಖ್ಯಾತರಾಗಿರುವ ಜಿಲ್ಲೆಗಳಿಂದ ಸ್ಥಳಾಂತರಗೊಂಡ ಮೈತೇಯಿ ನಿವಾಸಿಗಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.
‘ಚುರಾಚಾಂದ್ಪುರ ಮೈತೇಯಿ ಸಮುದಾಯದವರು ವಾಸಿಸುವ ಹಲವಾರು ಗ್ರಾಮಗಳು ಐತಿಹಾಸಿಕವಾಗಿಯೂ ನಮಗೆ ಸೇರಿದ್ದಾಗಿದೆ. ಹೆಚ್ಚುತ್ತಿರುವ ಒತ್ತುವರಿಯಿಂದ ನೈಜ ಮಾಲೀಕತ್ವಕ್ಕೆ ಅಪಾಯ ಎದುರಾಗಿದೆ. ನಮ್ಮ ಗ್ರಾಮಗಳಿಗೆ ಕಾನೂನಾತ್ಮಕ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ’ ಎಂದು ಚುರಾಚಾಂದ್ಪುರ ಏಕೀಕರಣ ಸಮಿತಿ ತಿಳಿಸಿದೆ.
ಗಲಭೆಯಲ್ಲಿ ನಿರ್ವಸಿತರಾದ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು, ನಿರಾಶ್ರಿತ ಶಿಬಿರಗಳಲ್ಲಿ ಹೆಚ್ಚಿನ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಮತ್ತೊಂದು ಸಮಿತಿ ಕೂಡ ಮನವಿ ಸಲ್ಲಿಸಿದ್ದು, ನಿರಾಶ್ರಿತರ ಶಿಬಿರಗಳಲ್ಲಿ ಉಚಿತ ವೈದ್ಯಕೀಯ ಸೇವೆ, ಉಚಿತ ಶಿಕ್ಷಣ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.