ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆಗೆ ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರ ಲಭಿಸಿತು. ಸುಮಾರು ಎಂಟು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮತ ಚಲಾಯಿಸುವುದಕ್ಕೂ ಮುನ್ನ ಶಿವಸೇನಾ ಪಕ್ಷ ಸಭಾತ್ಯಾಗ ಮಾಡಿತು.
ಮಸೂದೆ ಪರವಾಗಿ 125, ವಿರುದ್ಧವಾಗಿ 105 ಮತಗಳು ಚಲಾವಣೆಯಾದವು. ಇದಕ್ಕೂ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ನಿರ್ಣಯವನ್ನು ಮತಕ್ಕೆ ಹಾಕಲಾಯಿತು. ನಿರ್ಣಯದ ಪರವಾಗಿ 99, ವಿರುದ್ಧ 124 ಮತಗಳು ಬಿದ್ದವು.
ಅಸ್ಸಾಂ, ತ್ರಿಪುರಾದಲ್ಲಿ ಹಿಂಸಾಚಾರ: ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಬುಧವಾರ ಹಿಂಸಾಚಾರಕ್ಕೆ ತಿರುಗಿದೆ. ಹಿಂಸಾಪೀಡಿತ ತ್ರಿಪುರಾದಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಅಸ್ಸಾಂನಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಅಸ್ಸಾಂನ ಗುವಾಹಟಿಯಲ್ಲಿ ಬುಧವಾರ ಬೆಳಿಗ್ಗೆಯೇ ಸಚಿವಾಲಯ ಕಟ್ಟಡದ ಎದುರು ಜಮಾಯಿಸಿದ ಸಾವಿರಾರು ಪ್ರತಿಭಟನಕಾರರು ಮಸೂದೆ ವಿರೋಧಿಸಿ ಘೋಷಣೆ ಕೂಗಿದರು. ಇಲ್ಲಿ ಪ್ರತಿಭಟನಕಾರರು ಹಾಗೂ ಭದ್ರತಾಪಡೆ ಸಿಬ್ಬಂದಿ ಮಧ್ಯೆ ಘರ್ಷಣೆ ನಡೆದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಪ್ರಯೋಗಿಸಿದರು.ರೊಚ್ಚಿಗೆದ್ದ ಹೋರಾಟಗಾರರು ಬ್ಯಾರಿಕೇಡ್ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯು ಸಂಜೆಯ ವೇಳೆಗೆ ಹಿಂಸೆಗೆ ತಿರುಗಿದ್ದರಿಂದ ಪೊಲೀಸರು ಕರ್ಫ್ಯೂ ಹೇರಿದರು.
ಮುಂಜಾಗ್ರತಾ ಕ್ರಮವಾಗಿ ಅಸ್ಸಾಂನಲ್ಲಿ ಬುಧವಾರ ಸಂಜೆ 7 ಗಂಟೆಯಿಂದ ಮೊಬೈಲ್ ಇಂಟರ್
ನೆಟ್ ಮೇಲೆ ನಿರ್ಬಂಧ ವಿಧಿಸಲಾಗಿದೆ. ಇದು 24 ಗಂಟೆ ಜಾರಿಯಲ್ಲಿರಲಿದೆ.ತ್ರಿಪುರಾದಲ್ಲಿ ಪರಿಸ್ಥಿತಿ ಗಂಭೀರ
ವಾಗಿದೆ. ಮಸೂದೆ ವಿರೋಧಿಗಳು ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗಲು ಒಪ್ಪದವರ ನಡುವೆ ಘರ್ಷಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.