ADVERTISEMENT

ತಮಿಳುನಾಡು ಸಚಿವ ಬಾಲಾಜಿ ಅರ್ಜಿ: ಇ.ಡಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:17 IST
Last Updated 28 ಮಾರ್ಚ್ 2024, 14:17 IST
ಸೆಂಥಿಲ್‌ ಬಾಲಾಜಿ
ಸೆಂಥಿಲ್‌ ಬಾಲಾಜಿ   

ಚೆನ್ನೈ: ತಮ್ಮ ವಿರುದ್ಧದ ಪ್ರಕರಣದಲ್ಲಿ ಮತ್ತೆ ವಾದ ಮಂಡನೆಗೆ ಅವಕಾಶ ನೀಡುವಂತೆ ಕೋರಿ ಡಿಎಂಕೆ ಸಚಿವ ವಿ.ಸೆಂಥಿಲ್‌ ಬಾಲಾಜಿ ಸಲ್ಲಿಸಿರುವ ಹೊಸ ಅರ್ಜಿಗೆ ಸಂಬಂಧಿಸಿ ಇಲ್ಲಿನ ಸೆಷನ್ಸ್‌ ಕೋರ್ಟ್‌, ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣವೊಂದರಲ್ಲಿ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಕಳೆದ ವರ್ಷ ಜೂನ್‌ನಲ್ಲಿ ಬಂಧಿಸಿತ್ತು. ಪ್ರಕರಣ ರದ್ದು ಕೋರಿ ಬಾಲಾಜಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ, ಬಾಲಾಜಿ ಪರ ವಾದ ಮಂಡನೆಯನ್ನು ಕೋರ್ಟ್‌ ಮುಕ್ತಾಯಗೊಳಿಸಿತ್ತು.

ಬಾಲಾಜಿ ಅವರ ಅರ್ಜಿ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಆನಂದ್, ಇ.ಡಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್‌ 4ಕ್ಕೆ ಮುಂದೂಡಿದರು.

ADVERTISEMENT

ತಮ್ಮ ವಿರುದ್ಧದ ಪ್ರಕರಣ ರದ್ದು ಮಾಡುವಂತೆ ಕೋರಿ ಸಚಿವ ಸೆಂಥಿಲ್‌ ಬಾಲಾಜಿ ಸಲ್ಲಿಸಿದ್ದ ಮೂಲ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಎಸ್‌. ಅಲ್ಲಿ ಅವರು, ಮಾ.22ರಂದು ಆದೇಶವನ್ನು ಕಾಯ್ದಿರಿಸಿದ್ದರು. ಈ ನಡುವೆ, ಬಾಲಾಜಿ ಅವರು ಹೊಸದಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

‘ಎರಡು ಮೂಲ ಚಲನ್‌ಗಳನ್ನು ಹಾಜರುಪಡಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಹೊಸದಾಗಿ ಸಲ್ಲಿಸಿದ್ದ ಅರ್ಜಿಯಲ್ಲಿ ಬಾಲಾಜಿ ಕೋರಿದ್ದರು. ಅದರಂತೆ, ಬ್ಯಾಂಕ್‌ ಅಧಿಕಾರಿಗಳಿಗೆ ಕೋರ್ಟ್‌, ಸಮನ್ಸ್‌ ಜಾರಿ ಮಾಡಿತು.

‘ಈ ಹಿಂದೆ ಸೂಚನೆ ನೀಡಿದ್ದರೂ ಬ್ಯಾಂಕ್‌ ಅಧಿಕಾರಿಗಳು ಮೂಲ ಚಲನ್‌ಗಳನ್ನು ಹಾಜರುಪಡಿಸದ ಕಾರಣ, ಸಮರ್ಥ ವಾದ ಮಂಡನೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮತ್ತೆ ವಾದ ಮಂಡನೆಗೆ ಅವಕಾಶ ನೀಡಬೇಕು. ಇಲ್ಲದೇ ಹೋದರೆ ನನಗೆ ಸರಿಪಡಿಸಲಾಗದ ಹಾನಿ ಮತ್ತು ಸಮಸ್ಯೆಯಾಗಲಿದೆ’ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.