ಶ್ರೀನಗರ: ಕಾಶ್ಮೀರದ ಅನಂತನಾಗ್ ಜಿಲ್ಲೆಯ ಚೆಕ್ಪೋಸ್ಟ್ವೊಂದರ ಬಳಿ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದರೂ, ನಿಲ್ಲಿಸದೇ ಪೊಲೀಸ್ ಸಿಬ್ಬಂದಿ ಮೇಲೆ ನುಗ್ಗಿಸಲು ಪ್ರಯತ್ನಿಸಿದ ಚಾಲಕನ ಮೇಲೆ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಸಿಬ್ಬಂದಿ ಗುಂಡು ಹಾರಿಸಿದ್ದು, ಘಟನೆಯಲ್ಲಿ ನಾಗರಿಕೊಬ್ಬರು ಮೃತಪಟ್ಟಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಮೊಂಘಾಲ್ ಸೇತುವೆ ಬಳಿ 40ನೇ ಬೆಟಾಲಿಯನ್ನ ಸಿಆರ್ಪಿಎಫ್ ತಂಡದವರು ನಾಕಾಬಂದಿ ಹಾಕಿದ್ದರು. ಈ ಭಾಗದಲ್ಲಿ ಗುರುವಾರ ರಾತ್ರಿ 9.35ರ ವೇಳೆಗೆ ನಂಬರ್ ಪ್ಲೇಟ್ ಇಲ್ಲದ ಶಂಕಿತ ಎಸ್ಯುವಿ ವಾಹನವೊಂದು ಸಾಗುತ್ತಿತ್ತು. ಪೊಲೀಸ್ ಸಿಬ್ಬಂದಿ ವಾಹನವನ್ನು ನಿಲ್ಲಿಸುವಂತೆ ಸಿಗ್ನಲ್ ತೋರಿದರು.
ಚಾಲಕ ವಾಹನ ನಿಲ್ಲಿಸದೇ, ನಾಕಾಬಂದಿ ತಂಡದ ಮೇಲೆ ನುಗ್ಗಿಸಲು ಪ್ರಯತ್ನಿಸಿದ. ಪೊಲೀಸರು ಆತ್ಮರಕ್ಷಣೆಗಾಗಿ ವಾಹನದ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ವಾಹನದೊಳಗಿದ್ದ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ. ಮೃತರ ಗುರುತು ಮತ್ತು ಅವರ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಮುಂದುವರಿದಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.