ಕೋಲ್ಕತ್ತ: ಒಂಬತ್ತು ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗಾಗಿ ಸೋಮವಾರ ನಡೆದ ನಾಲ್ಕನೇ ಹಂತದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಮಾತ್ರ ಕೆಲವೆಡೆ ಗಲಭೆ ನಡೆದು ಹಲವರು ಗಾಯಗೊಂಡಿದ್ದಾರೆ. ನಾಲ್ಕನೇ ಹಂತದಲ್ಲಿ ಸರಾಸರಿ ಶೇ 63.17ರಷ್ಟು ಮತದಾನ ನಡೆದಿದೆ.
ಪಶ್ಚಿಮ ಬಂಗಾಳದ ದುರ್ರಾಜ್ ಪುರ್ ಕ್ಷೇತ್ರದಲ್ಲಿ ಮೊಬೈಲ್ ಫೋನ್ ಸಹಿತ ಮತಗಟ್ಟೆಯೊಳಗೆ ಹೋಗುತ್ತಿದ್ದವರನ್ನು ಭದ್ರತಾ ಪಡೆಯ ಸಿಬ್ಬಂದಿ ತಡೆದಾಗ ಗಲಭೆ ಆರಂಭವಾಗಿತ್ತು. ಕೆಲವರು ಸಿಆರ್ಪಿಎಫ್ ಜವಾನರತ್ತ ಕಲ್ಲುಗಳನ್ನು ತೂರಿದ್ದರು. ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿರುವುದನ್ನು ಮನಗಂಡ ಸಿಬ್ಬಂದಿ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಭದ್ರತಾ ಪಡೆಗಳ ವಿರುದ್ಧ ಮಮತಾ ಕಿಡಿ
ಅಸನ್ಸೊಲ್ ಕ್ಷೇತ್ರದ ಮತಗಟ್ಟೆಯ ಸಮೀಪ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಕಾರಿನ ಗಾಜನ್ನು ಪುಡಿಮಾಡಲಾಗಿದೆ. ಮತಗಟ್ಟೆಯೊಳಗಿದ್ದ ಅಧಿಕಾರಿಗಳ ಜೊತೆ ಸುಪ್ರಿಯೊ ಮಾತಿನ ಚಕಮಕಿ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದ ಟಿಎಂಸಿ ಕಾರ್ಯಕರ್ತರು ಅವರ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆಸಿದ ಆರೋಪದ ಮೇಲೆ ಸುಪ್ರಿಯೊ ವಿರುದ್ಧ ಆಯೋಗದ ಸೂಚನೆ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಬಿರ್ಭೂಮ್ ಕ್ಷೇತ್ರದಲ್ಲಿ ಮೊಬೈಲ್ ಫೋನ್ಸಹಿತ ಮತಗಟ್ಟೆಯೊಳಗೆ ಹೋಗಿದ್ದಕ್ಕೆ ಬಿಜೆಪಿಯ ಅಭ್ಯರ್ಥಿ ದುಧ್ಕುಮಾರ್ ಮಂಡಲ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಮಾಡಿದೆ. ಮಾತ್ರವಲ್ಲದೆ ಆ ಮತಗಟ್ಟೆಯ ಅಧಿಕಾರಿಯನ್ನು ವಜಾ ಮಾಡಲಾಗಿದೆ.
***
ಸಿಆರ್ಪಿಎಫ್ ಜವಾನರು ಮತಗಟ್ಟೆಯೊಳಗೆ ನುಗ್ಗಿ ಗುಂಡುಹಾರಿಸಿದ್ದಾರೆ ಎಂದು ವರದಿಯಾಗಿದೆ. ಅವರು ಮತಗಟ್ಟೆ ಹೊರಗೆ ಕಾರ್ಯನಿರ್ವಹಿಸಬೇಕೇ ವಿನಾ ಒಳಗೆ ಹೋಗುವ ಅಧಿಕಾರ ಇಲ್ಲ. ಕಾನೂನು ಸುವ್ಯವಸ್ಥೆ ರಾಜ್ಯದ ಹೊಣೆ
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.