ADVERTISEMENT

ಕೋವಿಡ್ ನಾಲ್ಕನೆ ಅಲೆ ಅಂದಾಜು ಇಲ್ಲ ಪರಿಸ್ಥಿತಿಯ ಸೂಕ್ಷ್ಮ ಅವಲೋಕನ –ಕೇಂದ್ರ

ಪಿಟಿಐ
Published 22 ಮಾರ್ಚ್ 2022, 14:09 IST
Last Updated 22 ಮಾರ್ಚ್ 2022, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ಜಾಗತಿಕವಾಗಿ ಕೊರೊನಾ ಸೋಂಕಿನ ಚಲನೆಯ ಗತಿ ಮತ್ತು ರೂಪಾಂತರ ಸೋಂಕು ಪತ್ತೆ ಕುರಿತ ಬೆಳವಣಿಗೆಯನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ, ದೇಶದಲ್ಲಿ ಕೋವಿಡ್‌ನ ಅಲೆಯನ್ನು ನಿರ್ದಿಷ್ಟವಾಗಿ ಅಂದಾಜು ಮಾಡುವಲ್ಲಿ ಗಣಿತ ಮಾದರಿ ಒಳಗೊಂಡಂತೆ ಲಭ್ಯವಿರುವ ಎಲ್ಲ ಮಾದರಿಗಳು ವಿಫಲವಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

ರಾಜ್ಯಸಭೆಯಲ್ಲಿ ಈ ಕುರಿತು ಲಿಖಿತ ಉತ್ತರ ನೀಡಿರುವ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಅವರು,ಸಕಾಲದಲ್ಲಿ ಹೊಸ ಸೋಂಕು ಪತ್ತೆ ಸಲುವಾಗಿ ಲಭ್ಯ ಸೋಂಕು ಮಾದರಿಗಳನ್ನು ಜೆರೋಮ್ ಸೀಕ್ವೆನ್ಸಿಂಗ್‌ಗೆ ನಿಯಮಿತವಾಗಿ ಒಳಪಡಿಸಲಾಗುತ್ತಿದೆ ಎಂದರು.

ದೇಶದಲ್ಲಿ ಜೂನ್‌, ಆಗಸ್ಟ್‌ ತಿಂಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಬರಬಹುದು ಎಂದು ಐಐಟಿಯ ಸಂಶೋಧಕರು ಅಂದಾಜಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಾಲ್ಕನೇ ಅಲೆ ಬರುತ್ತದೆ ಎಂದು ಅಂದಾಜು ಮಾಡಿಲ್ಲ ಎಂದು ಐಐಟಿ ಕಾನ್ಪುರ ಸ್ಪಷ್ಟಪಡಿಸಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸಂಶೋಧಕರ ತಂಡವೊಂದು ಗಣಿತ ಮಾದರಿ ಆಧರಿಸಿ ಸಂಶೋಧನೆ ನಡೆಸಿದ್ದು, ವರದಿಯನ್ನು ಸಲ್ಲಿಸಿದೆ. ಅದು ಈಗ ಪರಿಶೀಲನೆಯಲ್ಲಿದೆ. ವಸ್ತುಸ್ಥಿತಿ ಅಥವಾ ಅಂದಾಜು ಆಧರಿಸಿ ಕೆಲ ಮಾದರಿಗಳಲ್ಲಿ ಅಧ್ಯಯನ ಮಾಡಲಾಗುತ್ತದೆ. ಇದರಲ್ಲಿ ಸ್ಪಷ್ಟತೆ ಇರುವುದಿಲ್ಲ ಎಂದರು.

ಸಾಮಾನ್ಯವಾಗಿ ಈ ಅಧ್ಯಯನಕ್ಕಾಗಿ ಭಾಗಶಃ ಮಾದರಿಗಳನ್ನು ಅವಲಂಬಿಸಲಿದ್ದು, ಒಟ್ಟು ಜನಸಂಖ್ಯೆಗೆಫಲಿತಾಂಶವನ್ನು ಅನ್ವಯಿಸಲಾಗುತ್ತದೆ. ಸೀಮಿತ ಪ್ರದೇಶದಕ್ಕೆ ಅನ್ವಯಿಸಿ ಇದರ ಫಲಿತಾಂಶ ವಸ್ತುನಿಷ್ಠವಾಗಿರಬಹುದು. ಆದರೆ, ಮತ್ತೆ ಮತ್ತೆ ನಿಖರವಾದ ಫಲಿತಾಂಶವನ್ನು ನೀಡಲು ಈ ಅಧ್ಯಯನಗಳು ವಿಫಲವಾಗಿವೆ ಎಂದು ಸಚಿವೆಯು ಸ್ಪಷ್ಟಪಡಿಸಿದರು.

ಸಿದ್ಧತೆ: ಮುಂಜಾಗ್ರತೆಯಾಗಿ ಯಾವುದೇ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆಗಾಗಿ ರಾಷ್ಟ್ರೀಯ ಆರೋಗ್ಯ ಮಿಷನ್, ರಾಜ್ಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ರಾಜ್ಯಗಳಿಗೆ ಹಣಕಾಸುವ ನೆರವು ಒದಗಿಸಲಾಗಿದೆ ಎಂದು ತಿಳಿಸಿದರು.

ತಜ್ಞರು, ಭಾಗಿದಾರರು ಒಳಗೊಂಡಂತೆ ನಿಯಮಿತವಾಗಿ ಪರಿಶೀಲನಾ ಸಭೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.