ADVERTISEMENT

ಕಠುವಾದಲ್ಲಿ ಮೇಘಸ್ಫೋಟ, ಭೂಕುಸಿತ: 7 ಮಂದಿ ಸಾವು

ಪಿಟಿಐ
Published 17 ಆಗಸ್ಟ್ 2025, 15:59 IST
Last Updated 17 ಆಗಸ್ಟ್ 2025, 15:59 IST
<div class="paragraphs"><p> ಮೇಘಸ್ಫೋಟ</p></div>

ಮೇಘಸ್ಫೋಟ

   

ಜಮ್ಮು: ಇಲ್ಲಿನ ಕಠುವಾ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಮೇಘಸ್ಫೋಟ ಹಾಗೂ ಭೂಕುಸಿತದಿಂದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಕುಟುಂಬಗಳ ಐದು ಮಂದಿ ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದಲೂ ನಿರಂತರ ಸುರಿದ ಮಳೆಯಿಂದ ರಾಜಭಾಗ್‌ನ ಜೋದ್‌ ಘಾಟ್‌ ಪ್ರದೇಶ ಹಾಗೂ ಜಾಂಗ್ಲೋಟ್‌ನ ಬರ್ಗಾ ಗ್ರಾಮದಲ್ಲಿ ವಿಪತ್ತು ಸಂಭವಿಸಿದೆ. ನದಿ ನೀರಿನ ಮಟ್ಟವು ತೀವ್ರವಾಗಿ ಏರಿಕೆಯಾಗಿದ್ದು, ತಗ್ಗುಪ‍್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT


ಜಿಲ್ಲೆಯ ಚಸೋತಿ ಗ್ರಾಮದಲ್ಲಿ ಆ.14ರಂದು ಸಂಭವಿಸಿದ ಭೂಕುಸಿತದಿಂದ 60 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 

ಜೋಧ್ ಘಾಟ್‌ನಲ್ಲಿ ಸುರ್ಮು ದಿನ್‌ (32), ಅವರ ಮಕ್ಕಳಾದ ಪನು(6), ಶೆಡು(5), ಜುಲ್ಪುನ್(15) ತಹು (2) ಮೃತಪಟ್ಟಿದ್ದು, ಜಾಂಗ್ಲೋಟ್‌ನಲ್ಲಿ ರೇಣುದೇವಿ (39) ಮಗಳು ರಾಧಿಕಾ (9) ಮೃತಪಟ್ಟಿದ್ದಾರೆ. ಜೋಧ್ ಘಾಟ್‌ನಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ಸೇನಾ ಸಿಬ್ಬಂದಿಯು ಆಸ್ಪತ್ರೆಗೆ ದಾಖಲಿಸಿದ್ದಾರೆ.


‘ಭಾರತೀಯ ಸೇನೆಯು ಕಠುವಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಸ್ಥರನ್ನು ರಕ್ಷಿಸಿ, ಭರವಸೆ ತುಂಬುತ್ತಿದೆ. ಆಹಾರ ಪೂರೈಕೆ ಜೊತೆಗೆ ಕಾಳಜಿ ವಹಿಸಲಾಗುತ್ತಿದೆ’ ಎಂದು ‘ರೈಸಿಂಗ್‌ ಸ್ಟಾರ್‌ ಕೋರ್’ ‘ಎಕ್ಸ್‌’ನಲ್ಲಿ ಚಿತ್ರ ಸಮೇತ ಪೋಸ್ಟ್‌ ಮಾಡಿದೆ. 


ಕಠುವಾ ಪೊಲೀಸ್‌ ಠಾಣಾ ವ್ಯಾಪ್ತಿಯ ಛಂಗ್ಡಾ ಗ್ರಾಮ, ಲಖನ್‌ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ದಿಲ್ವಾನ್‌ ಹಟ್ಲಿಯಲ್ಲಿ ಭೂಕುಸಿತ ಸಂಭವಿಸಿದೆ. ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ.


ನದಿ ನೀರಿನ ಮಟ್ಟ ಏರಿಕೆ: ಭಾರಿ ಮಳೆಯಿಂದ ಉಜ್‌ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರಿಂದ ಅಂಗಡಿ, ಮನೆಗಳು ಮುಳುಗಿವೆ. ಜಿಲ್ಲಾಡಳಿತವು ಪರಿಸ್ಥಿತಿ ಮೇಲೆ ನಿಗಾ ವಹಿಸಿದೆ. ಬೆಟ್ಟದ ಮೇಲೆ ವಾಸಿಸುತ್ತಿರುವ ಜನರಿಗೆ ಮನೆಯಲ್ಲಿ ಇರುವಂತೆ ಸೂಚಿಸಿದ್ದು, ನದಿಪಾತ್ರಗಳಿಗೆ ತೆರಳದಂತೆ ಸೂಚಿಸಿದೆ.


ರೈಲು ಸಂಚಾರ ವ್ಯತ್ಯಯ: ಭೂಕುಸಿತದಿಂದ ಜಮ್ಮು– ಪಠಾಣ್‌ಕೋಟ್‌ ನಡುವಿನ ರೈಲು ಸಂಚಾರ ವ್ಯತ್ಯಯಗೊಂಡಿದೆ. ಹಲವು ಸ್ಥಳೀಯ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಹಾಗೂ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.


ನೆರವು ಘೋಷಣೆ: ‘ದುರಂತದಲ್ಲಿ ಮೃತಪ‍ಟ್ಟ ಕುಟುಂಬಗಳ ಸದಸ್ಯರಿಗೆ ತಲಾ ₹2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹1 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ₹50 ಸಾವಿರ ನೆರವು ನೀಡಲಾಗುವುದು’ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಿಳಿಸಿದ್ದಾರೆ.


ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ₹1 ಲಕ್ಷ, ಗರಿಷ್ಠ ಹಾನಿಯಾದ ಮನೆಗಳಿಗೆ ₹50 ಸಾವಿರ ಹಾಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ ತಲಾ ₹25 ಸಾವಿರ ನೆರವು ಪ್ರಕಟಿಸಲಾಗಿದೆ.

ಮುಂಬೈ: ಕೋಡಿ ಬಿದ್ದ ತುಳಸಿ ಕೆರೆ

ಮುಂಬೈ : ಮುಂಬೈನ ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿರುವ ತುಳಸಿ ಕೆರೆಯು ಕೋಡಿ ಬಿದ್ದಿದೆ. ನಗರದಲ್ಲಿ ಕುಡಿಯುವ ನೀರು ಪೂರೈಸಲು ಇರುವ ಏಳು ಕೆರೆಗಳು ಶೇ 90ರಷ್ಟು ಭರ್ತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.