ADVERTISEMENT

‘ಕುಂಭ ಮೇಳ’ ಆಯೋಜನೆ ಬಗ್ಗೆ ಚರ್ಚಿಸಲು ಮೋದಿ ಭೇಟಿ ಮಾಡಿದ ಯೋಗಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 1:58 IST
Last Updated 7 ಡಿಸೆಂಬರ್ 2018, 1:58 IST
   

ನವದೆಹಲಿ:ಪ್ರಯಾಗರಾಜ್‌(ಹಿಂದಿನ ಅಲಹಾಬಾದ್‌)ನಲ್ಲಿ ನಡೆಯಲಿರುವ ಧಾರ್ಮಿಕ ಸಮಾವೇಶಕುಂಭ ಮೇಳಕ್ಕೆ ಸಕಲ ಸಿದ್ಧತೆ ನಡೆಸುವ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿಭೇಟಿ ಮಾಡಿ ಮಾತುಕತೆ ನಡೆಸಿದರು.

ಇಲ್ಲಿನಗಂಗಾ, ಯಮುನಾ ಮತ್ತು ಪುರಾಣಗಳಲ್ಲಿ ಉಲ್ಲೇಖ ಇರುವ ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸ್ಥಳದಲ್ಲಿ 45 ದಿನಗಳ ಕಾಲ ನಡೆಯುವ ಈ ಉತ್ಸವವು 2019ರ ಜನವರಿ 15ರಿಂದ ಆರಂಭವಾಗಲಿದೆ. ಲಕ್ಷಾಂತರ ಭಕ್ತರು ಭಾಗವಹಿಸಲಿದ್ದು, ಪಾಪ ಪರಿಹಾರಕ್ಕಾಗಿ ಪವಿತ್ರ ನದಿ ಸ್ನಾನ ಮಾಡುತ್ತಾರೆ.

ಕುಂಭ ಮೇಳದ ಮಾತ್ರವಲ್ಲದೆ, ಮುಂದಿನ ವರ್ಷ ವಾರಣಾಸಿಯಲ್ಲಿ ಆಯೋಜಿಸಲಾಗಿರುವ ‘ಪ್ರವಾಸಿ ಭಾರತ ದಿವಸ’ ಕಾರ್ಯಕ್ರಮದ ಬಗ್ಗೆಯೂ ಯೋದಿ ಚರ್ಚೆ ನಡೆಸಿದ್ದಾರೆ.

ADVERTISEMENT

‘ನವ ಭಾರತ ನಿರ್ಮಿಸುವಲ್ಲಿ ಭಾರತೀಯ ವಲಸಿಗರ ಪಾತ್ರ’ ಘೋಷವಾಕ್ಯದ ಅಡಿಯಲ್ಲಿ ನಡೆಯಲಿರುವ 15ನೇ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮವನ್ನು ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ವಿದೇಶಾಂಗ ಸಚಿವಾಲಯ ಆಯೋಜಿಸಿದೆ.

ಕುಂಭ ಮೇಳಕ್ಕೆಪೌರಾಣಿಕ ಹಿನ್ನೆಲೆ

ಸಮುದ್ರ ಮಥನದಲ್ಲಿ ದೊರೆತ ಅಮೃತ ಕಲಶಕ್ಕಾಗಿ ದೇವತೆಗಳು ಮತ್ತು ಅಸುರರ ಮಧ್ಯೆ 12 ದಿನಗಳ ಕಾಲ (ಮಾನವನ ಲೆಕ್ಕದಲ್ಲಿ 12 ವರ್ಷ) ಘನಘೋರ ಯುದ್ಧ ನಡೆಯುತ್ತದೆ. ಯುದ್ಧ ನಡೆದಿರುವಾಗಲೇ ವಿಷ್ಣು, ‘ಅಮೃತದ ಕಲಶ’ತೆಗೆದುಕೊಂಡು ಹೋಗುವಾಗ ಅಮೃತದ ನಾಲ್ಕು ಹನಿಗಳು ಅಲಹಾಬಾದ್, ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್‌ನಲ್ಲಿ ಬಿದ್ದಿವೆ ಎನ್ನುವುದು ಪುರಾಣ, ಮಹಾಕಾವ್ಯಗಳಲ್ಲಿ ಉಲ್ಲೇಖವಾಗಿದೆ.

ಆಸ್ತಿಕರ ಭಕ್ತಿ - ಶ್ರದ್ಧೆ ಫಲವಾಗಿಯೇ ಶತ-ಶತಮಾನಗಳಿಂದಲೂ ಕುಂಭ ಮೇಳಗಳು ನಡೆಯುತ್ತ ಬಂದಿದೆ.ಈ ಪವಿತ್ರ ದಿನ, ಈ ಪುಣ್ಯ ಸ್ಥಳಗಳಲ್ಲಿ ಸ್ನಾನ ಮಾಡಿದರೆ ಪಾಪ ಕೃತ್ಯಗಳು ತೊಳೆದುಕೊಂಡು ಹೋಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಹಿಂದೂಗಳಲ್ಲಿ ಇದೆ. ಶತಮಾನಗಳಿಂದಲೂ ಈ `ಪವಿತ್ರ ಸ್ನಾನ' ಆಚರಣೆಯಲ್ಲಿ ಇದೆ.

ಕ್ರಿ. ಶ. 629-645ರ ಮಧ್ಯೆ ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಯಾತ್ರಿಕ ಹುಯೆನ್ ತ್ಸಾಂಗ್ ಪ್ರವಾಸ ಕಥನದಲ್ಲಿಯೂ ಕುಂಭ ಮೇಳದ ಬಗ್ಗೆ ಲಿಖಿತ ಉಲ್ಲೇಖವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.