ನವದೆಹಲಿ: ವಾಣಿಜ್ಯ ಗಣಿಗಾರಿಕೆಗಾಗಿ 41 ಕಲ್ಲಿದ್ದಲು ನಿಕ್ಷೇಪಗಳನ್ನು ಖಾಸಗಿಯವರಿಗೆ ಹಂಚಿಕೆ ಮಾಡುವ ಆನ್ಲೈನ್ ಹರಾಜು ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು.
‘ಕಲ್ಲಿದ್ದಲು ನಿಕ್ಷೇಪಗಳ ಹರಾಜಿನಿಂದ ಮುಂದಿನ 5ರಿಂದ 7 ವರ್ಷಗಳಲ್ಲಿ ದೇಶದಲ್ಲಿ ₹33,000 ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ‘ಆತ್ಮನಿರ್ಭರ’ತೆಯ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ’ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.
‘ಹರಾಜು ಪ್ರಕ್ರಿಯೆಯು ಕಲ್ಲಿದ್ದಲು ಕ್ಷೇತ್ರವನ್ನು ದಶಕಗಳ ‘ಲಾಕ್ಡೌನ್’ನಿಂದ ಮುಕ್ತಗೊಳಿಸಿದ್ದಷ್ಟೇ ಅಲ್ಲ, ಭಾರತವನ್ನು ಕಲ್ಲಿದ್ದಲು ರಫ್ತುಮಾಡುವ ಅತಿ ದೊಡ್ಡ ರಾಷ್ಟ್ರವಾಗಿಸಲಿದೆ’ ಎಂದು ಮೋದಿ ಹೇಳಿದರು.
ಶಾ ಅಭಿನಂದನೆ: ಕಲ್ಲಿದ್ದಲು ನಿಕ್ಷೇಪಗಳ ಹರಾಜು ಪ್ರಕ್ರಿಯೆಯು ಆರಂಭಿಸಿದ್ದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಶಿ ಅವರನ್ನು ಗೃಹಸಚಿವ ಅಮಿತ್ ಶಾ ಅಭಿನಂದಿಸಿದ್ದಾರೆ. ‘ಇದು ಸಮೃದ್ಧ, ಭ್ರಷ್ಟಾಚಾರ ಮುಕ್ತ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಕಲ್ಲಿದ್ದಲು ನಿಕ್ಷೇಪಗಳು ಬಂಡವಾಳವನ್ನು ಆಕರ್ಷಿಸುವುದಷ್ಟೇ ಅಲ್ಲದೆ, 2.8 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿ, ರಾಜ್ಯ ಸರ್ಕಾರಗಳಿಗೆ ವಾರ್ಷಿಕ ₹20,000 ಕೋಟಿ ಆದಾಯವನ್ನು ತಂದುಕೊಡಲಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.