ನವದೆಹಲಿ: ಪಶ್ಚಿಮ ಬಂಗಾಳದ ಅಸನ್ಸೋಲ್ನ ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ನ ಗಣಿಗಳಲ್ಲಿನ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಅನುಪ್ ಮಾಜಿ ಅವರನ್ನು ಸಿಬಿಐ ಮಂಗಳವಾರ ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 6ರವರೆಗೆ ಮಾಜಿಯನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿತ್ತು. ‘ಅರ್ಜಿದಾರರನ್ನು ಏಪ್ರಿಲ್ 6 ರವರೆಗೆ ಬಂಧಿಸುವಂತಿಲ್ಲ. ಆದರೆ ಈ ಆದೇಶವು ತನಿಖೆಯನ್ನು ತಡೆಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ’ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿತ್ತು.
ಅಲ್ಲದೆ, ಈ ಪ್ರಕರಣದ ತನಿಖೆಗೆ ಅನುಪ್ ಮಾಜಿ ಸಹಕರಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಬಹು ಕೋಟಿ ಕಲ್ಲಿದ್ದಲು ದರೋಡೆ ಹಗರಣವು ಪಶ್ಚಿಮ ಬಂಗಾಳದ ಕುನುಸ್ಟೋರಿಯಾ ಮತ್ತು ಕಾಜೋರಾ ಪ್ರದೇಶಗಳಲ್ಲಿನ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ನ ಗಣಿಗಳಿಗೆ ಸಂಬಂಧಿಸಿದ್ದಾಗಿದೆ.
ಮಾಜಿ ಅಲಿಯಾಸ್ ಲಾಲ್, ಇಸಿಎಲ್ ಜನರಲ್ ಮ್ಯಾನೇಜರ್ಗಳಾದ ಅಮಿತ್ ಕುಮಾರ್ ಧಾರ್, ಜಯೇಶ್ ಚಂದ್ರ ರೈ, ಇಸಿಎಲ್ ಭದ್ರತಾ ಮುಖ್ಯಸ್ಥ ತನ್ಮಯ್ ದಾಸ್, ಕುನುಸ್ಟೋರಿಯಾ ಪ್ರದೇಶದ ಭದ್ರತಾ ನಿರೀಕ್ಷಕ ಧನಂಜಯ್ ರೈ, ಕಜೋರ್ ಪ್ರದೇಶದ ಭದ್ರತಾ ಉಸ್ತುವಾರಿ ದೆಬಾಶಿಶ್ ಮುಖರ್ಜಿ ಅವರ ವಿರುದ್ಧ ಸಿಬಿಐ ಕಳೆದ ವರ್ಷದ ನವೆಂಬರ್ನಲ್ಲಿ ಎಫ್ಐಆರ್ ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.