ನವದೆಹಲಿ: ಜಾರ್ಖಂಡ್ ಕಲ್ಲಿದ್ದಲು ಘಟಕದ ಹಂಚಿಕೆ ಸಂಬಂಧಿಸಿದ (1999)ಅಕ್ರಮ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾಗಿರುವ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸಿಬಿಐ, ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ದಿಲೀಪ್ ರೇ ಜತೆಗೆ, ಪ್ರಕರಣದ ಆರೋಪಿಗಳಾಗಿರುವ, ಆಗ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳಾಗಿದ್ದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್ ಹಾಗೂ ಕ್ಯಾಸ್ಟ್ರೊನ್ ಟೆಕ್ನಾಲಜಿ ಲಿಮಿಟೆಡ್ನ (ಸಿಟಿಎಲ್) ನಿರ್ದೇಶಕ ಮಹೇಂದ್ರಕುಮಾರ್ ಅಗರ್ವಾಲ್ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಸಿಬಿಐ ಕೋರಿದೆ.
ಈ ಪ್ರಕರಣದ ವಿಚಾರಣೆ ನಡೆಸಿದವಿಶೇಷ ನ್ಯಾಯಮೂರ್ತಿ ಭಾರತ್ ಪರಾಶರ್ ಅವರುಅಕ್ಟೋಬರ್ 26ಕ್ಕೆ ಆದೇಶವನ್ನು ಕಾಯ್ದಿರಿಸಿದರು.
ಸರ್ಕಾರದ ಪರ ವಕೀಲರು, ಪ್ರಕರಣದ ಆರೋಪಿಗಳಾಗಿರುವ ಸಿಟಿಎಲ್ ಮತ್ತು ಕ್ಯಾಸ್ಟ್ರೊನ್ ಮೈನಿಂಗ್ ಲಿ.(ಸಿಎಂಎಲ್) ಸಂಸ್ಥೆಗೆ ಗರಿಷ್ಠ ದಂಡವನ್ನು ವಿಧಿಸಬೇಕೆಂದು ವಾದ ಮಾಡಿದರು.
ಸಿಬಿಐ ಪರ ವಕೀಲರಾದ ಕೆ.ವಿ ಶರ್ಮಾ ಮತ್ತು ಎ.ಪಿ.ಸಿಂಗ್ ವಾದ ಮಂಡಿಸಿದ್ದರು. ಕೋವಿಡ್ 19 ಕಾರಣದಿಂದಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.