ನವದೆಹಲಿ: ಕಲ್ಲಿದ್ದಲುಅಕ್ರಮ ಹಂಚಿಕೆ ಹಗರಣದ ಪ್ರಮುಖ ಆರೋಪಿ, ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ದೆಹಲಿ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ದಿಲೀಪ್ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದರು. 1999ರಲ್ಲಿ ನಡೆದಿದ್ದ ಜಾರ್ಖಂಡ್ ಕಲ್ಲಿದ್ದಲು ಘಟಕದ ಅಕ್ರಮ ಹಂಚಿಕೆಯ ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.
‘ದಿಲೀಪ್ ರೇ ಜೊತೆಗೆ ಆಗ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳಾಗಿದ್ದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್ ಹಾಗೂ ಕ್ಯಾಸ್ಟ್ರೊನ್ ಟೆಕ್ನಾಲಜೀಸ್ ಲಿಮಿಟೆಡ್ನ (ಸಿಟಿಎಲ್) ನಿರ್ದೇಶಕ ಮಹೇಂದ್ರ ಕುಮಾರ್ ಅಗರವಾಲ್ ಅವರಿಗೂ ತಲಾ ಮೂರು ವರ್ಷ ಸೆರೆವಾಸ ವಿಧಿಸಲಾಗಿದೆ. ಇವರೆಲ್ಲರೂ ತಲಾ ₹10 ಲಕ್ಷ ದಂಡವನ್ನೂ ಕಟ್ಟಬೇಕು’ ಎಂದು ವಿಶೇಷ ನ್ಯಾಯಾಧೀಶ ಭಾರತ್ ಪರಾಶರ್ ಅವರು ಸೋಮವಾರ ತಿಳಿಸಿದ್ದಾರೆ.
ಸಿಎಲ್ಟಿ ಮತ್ತು ಕ್ಯಾಸ್ಟ್ರೊನ್ ಮೈನಿಂಗ್ ಲಿಮಿಟೆಡ್ (ಸಿಎಂಎಲ್) ಸಂಸ್ಥೆಗಳೂ ಅಕ್ರಮದಲ್ಲಿ ಪಾಲ್ಗೊಂಡಿರುವ ಕಾರಣ ಈ ಸಂಸ್ಥೆಗಳು ತಲಾ ₹60 ಲಕ್ಷ ಹಾಗೂ ₹10 ಲಕ್ಷ ದಂಡ ಕಟ್ಟಬೇಕೆಂದೂ ನ್ಯಾಯಾಲಯ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.