ADVERTISEMENT

ನ್ಯಾಯಮೂರ್ತಿಗಳ ನೇಮಕ ವಿಳಂಬ ನ್ಯಾಯಾಂಗಕ್ಕೆ ತೊಂದರೆ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 16:32 IST
Last Updated 8 ಡಿಸೆಂಬರ್ 2022, 16:32 IST
   

ನವದೆಹಲಿ: ‘ನಮ್ಮ ಕೆಲಸವೇನಿದ್ದರೂ ಕಾನೂನು ಜಾರಿಗೊಳಿಸುವುದಾಗಿದೆ. ಸುಪ್ರೀಂ ಕೋರ್ಟ್‌ನ ಉನ್ನತ ವ್ಯವಸ್ಥೆ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಹಲವು ಸಮಯದಿಂದ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವುದರಿಂದ ತೊಂದರೆ ಆಗುತ್ತಿರುವುದು ನ್ಯಾಯಾಂಗಕ್ಕೆ’ ಎಂದು ನ್ಯಾಯಮೂರ್ತಿ ಎಸ್‌.ಕೆ. ಕೌಲ್‌ ಅವರ ನೇತೃತ್ವದ ಪೀಠ ಗುರುವಾರ ಹೇಳಿದೆ.

ನೇಮಕಾತಿಗೆ ಶಿಫಾರಸು ಮಾಡಿರುವ ಹೆಸರುಗಳನ್ನು ಈ ರೀತಿ ದೀರ್ಘ ಸಮಯ ಬಾಕಿ ಇರಿಸುವುದು ಅರ್ಹರು ನ್ಯಾಯಮೂರ್ತಿಗಳ ಹುದ್ದೆ ಪಡೆಯುವುದನ್ನು ತಡೆದಂತಾಗುವುದಿಲ್ಲವೇ ಮತ್ತು ಸೇವಾ ಹಿರಿತನದ ಮೇಲೂ ಪರಿಣಾಮ ಬೀರುವುದಿಲ್ಲವೇ ಎಂದು ‍ಪೀಠವು ಅಟಾರ್ನಿ ಜನರಲ್ ಅವರನ್ನು ಪ್ರಶ್ನಿಸಿತು.

‘ಕೊಲಿಜಿಯಂ ವ್ಯವಸ್ಥೆಯ ಭಾಗವಾಗುವುದನ್ನು ನ್ಯಾಯಮೂರ್ತಿಗಳು ಗೌರವದ ಸ್ಥಾನವೆಂದು ಪರಿಗಣಿಸಿದ್ದರು. ಆದರೆ,ನ್ಯಾಯಾಧೀಶರ ಹುದ್ದೆಗಳಿಗೆ ಶಿಫಾರಸು ಮಾಡಿರುವ ಹೆಸರುಗಳನ್ನು ಕೇಂದ್ರ ಸರ್ಕಾರ ಬಾಕಿ ಇರಿಸಿಕೊಂಡು, ವಿಳಂಬ ಮಾಡುತ್ತಿರುವುದರಿಂದಾಗಿಕೊಲಿಜಿಯಂ ಪೀಠ ಅಲಂಕರಿಸಲು ಒಪ್ಪಿಗೆ ನೀಡಿದ್ದ ನ್ಯಾಯಮೂರ್ತಿಗಳು ತಮ್ಮ ಸಮ್ಮತಿ ಪತ್ರಗಳನ್ನು ಹಿಂಪಡೆಯುತ್ತಿದ್ದಾರೆ’ ಎಂದು ಪೀಠ ತಿಳಿಸಿತು.

ADVERTISEMENT

ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಕೊಲಿಜಿಯಂ ವ್ಯವಸ್ಥೆಯಲ್ಲಿ ಮೀಸಲಾತಿ ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳಿದ್ದ ಪೀಠ ನೀಡಿರುವ ತೀರ್ಪು ಮತ್ತುಜ್ಞಾಪನಾ ಪತ್ರದ ಬಗ್ಗೆ ಅಟಾರ್ನಿ ಜನರಲ್‌ ಪ್ರಶ್ನೆ ಎತ್ತಿದಾಗ, ಮೊದಲು ಈ ವಿಷಯ ಬಗೆಹರಿಸುವಂತೆ ಪೀಠವು ಸೂಚಿಸಿತು.

ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ, ಹಿರಿಯ ವಕೀಲ ವಿಕಾಶ್‌ ಸಿಂಗ್‌ ಅವರು ಕಾನೂನು ಸಚಿವರು ಮತ್ತು ಉಪರಾಷ್ಟ್ರಪತಿಯವರ ಇತ್ತೀಚಿನ ಹೇಳಿಕೆಗಳನ್ನು ಪ್ರಸ್ತಾಪಿಸಿದರು.

ಆಗ ಪೀಠವು,‘ನಾಳೆ, ಜನರು ಮೂಲ ರಚನೆಯು (ತಳಹದಿಯೇ) ಸಂವಿಧಾನದ ಒಂದು ಭಾಗವಲ್ಲ ಎಂದು ಹೇಳುತ್ತಾರೆ! ನಿಯಂತ್ರಣದಲ್ಲಿರಬೇಕೆಂದು ನೀವು ಅವರಿಗೆ ಹೇಳಬೇಕಾಗುತ್ತದೆ’ ಎಂದು ಅಟಾರ್ನಿ ಜನರಲ್‌ ಅವರಿಗೆ ಹೇಳಿತು.

ಕೇಂದ್ರ ಸರ್ಕಾರ ಈ ಹಿಂದೆ ವಾಪಸ್‌ ಕಳುಹಿಸಿದ್ದ ಎರಡು ಹೆಸರುಗಳನ್ನು ಸ್ವತಃ ಕೊಲಿಜಿಯಂ ತನ್ನ ಪಟ್ಟಿಯಿಂದ ಕೈಬಿಟ್ಟಿದೆ. ಈ ನಿದರ್ಶನವೇ ಕೊಲಿಜಿಯಂನ ಶಿಫಾರಸು ಪರಿಪೂರ್ಣವಲ್ಲವೆಂದು ಗ್ರಹಿಸಲು ಕಾರಣವಾಗಿದೆ ಎಂದು ಕೇಂದ್ರದ ನಿಲುವನ್ನು ಎ.ಜಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.

ಇದನ್ನು ಒಪ್ಪದ ಪೀಠವು, ಇವೆಲ್ಲವೂ ಸಣ್ಣಪುಟ್ಟ ವಿದ್ಯಮಾನಗಳು. ಹಾಗಂತ ಸಂವಿಧಾನಿಕ ಪೀಠದ ತೀರ್ಪನ್ನು ನಿರ್ಲಕ್ಷಿಸಲು ಸರ್ಕಾರಕ್ಕೆಅನುಮತಿ ಕೊಡುವುದಿಲ್ಲ. ಒಂದು ತೀರ್ಪು ಪ್ರಕಟವಾದ ಮೇಲೆ ಅಲ್ಲಿ ಬೇರೆ ರೀತಿಯ ಗ್ರಹಿಕೆಗೆ ಅವಕಾಶವೇ ಇಲ್ಲ. ಕೊಲಿಜಿಯಂ ತೀರ್ಮಾನವೇ ಅಂತಿಮ ಎಂದು ಪೀಠ ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.