ADVERTISEMENT

ಅಭಿನಂದನ್‌ ಕರೆತನ್ನಿ: ಕಾಳಜಿಯ ಕರೆ

ಪಿಟಿಐ
Published 27 ಫೆಬ್ರುವರಿ 2019, 18:59 IST
Last Updated 27 ಫೆಬ್ರುವರಿ 2019, 18:59 IST
   

ನವದೆಹಲಿ:‘ಅಭಿನಂದನ್‌’ ಮತ್ತು ‘ಬ್ರಿಂಗ್‌ ಬ್ಯಾಕ್‌ ಅಭಿನಂದನ್‌’ (ಅಭಿನಂದನ್‌ ಅವರನ್ನು ಕರೆತನ್ನಿ) ಅಭಿಯಾನಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿವೆ. ಅಭಿನಂದನ್‌ ಅವರನ್ನು ಸುರಕ್ಷಿತವಾಗಿ ಕರೆತನ್ನಿ ಎಂಬ ಒಕ್ಕೊರಲ ಬೇಡಿಕೆ ಕೇಳಿ ಬಂದಿದೆ. ಅಭಿನಂದನ್‌ ಅವರನ್ನು ಪಾಕಿಸ್ತಾನ ನಡೆಸಿಕೊಂಡ ರೀತಿಗೆ ಭಾರಿ ಆಕ್ರೋಶವೂ ವ್ಯಕ್ತವಾಗಿದೆ.

ವಾಯುಪ‍ಡೆಯ ಪೈಲಟ್‌ ಅಭಿನಂದನ್‌ ಸುರಕ್ಷತೆಯ ಬಗ್ಗೆ ವ್ಯಾಪಕ ಕಾಳಜಿ ವ್ಯಕ್ತವಾಗಿದೆ. ಜಿನೀವಾ ಒಪ್ಪಂದದ ಪ್ರಕಾರ ಪಾಕಿಸ್ತಾನ ನಡೆದುಕೊಳ್ಳಬೇಕು, ಅತಿ ಶೀಘ್ರ ಅವರನ್ನು ಭಾರತಕ್ಕೆ ಕಳುಹಿಸಬೇಕು ಎಂದು ಇಲ್ಲಿನ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.ಅಭಿನಂದನ್‌ ಅವರನ್ನು ಸುರಕ್ಷಿತವಾಗಿ ಕರೆತರಲು ಬೇಕಾದ ಎಲ್ಲವನ್ನೂ ಕೇಂದ್ರ ಸರ್ಕಾರ ಮಾಡಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಒತ್ತಾಯಿಸಿದ್ದಾರೆ.

‘ಗಡಿಯ ಈ ಭಾಗದಲ್ಲಿ ನಿಮ್ಮ ಯೋಧನೊಬ್ಬ ಸಿಕ್ಕಿಹಾಕಿಕೊಂಡರೆ ನಾವು ಹೇಗೆ ಆತನನ್ನು ನಡೆಸಿಕೊಳ್ಳಬೇಕು ಎಂದು ಬಯಸುವಿರೋ ಅದೇ ರೀತಿಯಲ್ಲಿ ಅಭಿನಂದನ್‌ ಅವರನ್ನು ನಡೆಸಿಕೊಳ್ಳಿ’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ. ಜಿನೀವಾ ಒಪ್ಪಂದಕ್ಕೆ ಪಾಕಿಸ್ತಾನ ಬದ್ಧವಾಗಬೇಕು ಮತ್ತು ಅಭಿನಂದನ್‌ ಅವರನ್ನು ಮಾನವೀಯವಾಗಿ ನಡೆಸಿಕೊಳ್ಳ ಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿಆಗ್ರಹಿಸಿದ್ದಾರೆ.

ADVERTISEMENT

ಕಣ್ಣು ಕಟ್ಟಿದ ಅಭಿನಂದನ್‌ ಅವರ 46 ಸೆಕೆಂಡ್‌ನ ವಿಡಿಯೊವನ್ನು ಪಾಕಿಸ್ತಾನ ಬಿಡುಗಡೆ ಮಾಡಿದ ಬಳಿಕ ಭಾರತ ವ್ಯಗ್ರಗೊಂಡಿದೆ.

8 ದಿನಗಳಲ್ಲೇ ಬಿಡುಗಡೆಯಾಗಿದ್ದ ನಚಿಕೇತ್‌
ನವದೆಹಲಿ:
1999ರಲ್ಲಿ ಭಾರತ-ಪಾಕ್ ನಡುವೆ ಜರುಗಿದ ಕಾರ್ಗಿಲ್ ಯುದ್ಧದಲ್ಲಿಯೂ 26 ವರ್ಷ ವಯಸ್ಸಿನ ಭಾರತೀಯ ಫ್ಲೈಟ್ ಲೆಫ್ಟಿನೆಂಟ್ಕಂಭಂಪಾಟಿ ನಚಿಕೇತ್ ಪಾಕಿಸ್ತಾನದ ವಶವಾಗಿದ್ದರು. ಎಂಟು ದಿನಗಳ ಕಾಲ ಅವರನ್ನುಯುದ್ಧಬಂದಿಯನ್ನಾಗಿ ಇರಿಸಿ
ಕೊಳ್ಳಲಾಗಿತ್ತು. ಆನಂತರ ಅವರನ್ನು ಇಸ್ಲಾಮಾಬಾದಿನ ಭಾರತೀಯ ದೂತಾವಾಸಕ್ಕೆ ಒಪ್ಪಿಸಲಾಗಿತ್ತು.

ನಚಿಕೇತ್ ಅವರನ್ನು ಸದ್ಭಾವದ ಸಂಕೇತವಾಗಿ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿರುವುದಾಗಿ ಪಾಕ್ ವಿದೇಶಾಂಗ ಮಂತ್ರಾಲಯದಿಂದ ದೂತಾವಾಸಕ್ಕೆ ದೂರವಾಣಿ ಕರೆ ಬಂದಿತ್ತು. ಜಿನ್ನಾ ಸಭಾಂಗಣದಲ್ಲಿ ನಚಿಕೇತ್ ಅವರನ್ನು ಪತ್ರಕರ್ತರ ಮುಂದೆ ವಾಪಸು ಮಾಡುವ ಉದ್ದೇಶ ಪಾಕಿಸ್ತಾನಕ್ಕಿತ್ತು.

ಈ ಇರಾದೆಯನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿತು. ಆ ನಂತರ ನಚಿಕೇತ್ ಅವರನ್ನು ದೂತಾವಾಸಕ್ಕೆ ತಂದು ಬಿಡಲಾಯಿತು ಎಂದು ಆಗ ಪಾಕಿಸ್ತಾನದಲ್ಲಿ ಭಾರತೀಯ ಹೈಕಮಿಷನರ್ ಆಗಿದ್ದ ಜಿ.ಪಾರ್ಥಸಾರಥಿ ಸ್ಮರಿಸಿದ್ದಾರೆ. ನಚಿಕೇತ ಸೇವೆ ಸಲ್ಲಿಸುತ್ತಿದ್ದ ಸ್ಕ್ವ್ಯಾಡ್ರನ್ ಗೆ ಬಟಾಲಿಕ್ ವಲಯದ ರಕ್ಷಣೆಯ ಹೊಣೆ ವಹಿಸಲಾಗಿತ್ತು.

ಭಾರತದ ವಾಯುವಲಯ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್‌ 21 ಯುದ್ಧ ವಿಮಾನ ಹೊಡೆದುರುಳಿಸಿದೆ. ಇದೇ ಕಾರ್ಯಾಚರಣೆಯಲ್ಲಿ ಭಾರತದ ಒಂದು ಮಿಗ್‌ 21 ಯುದ್ಧ ವಿಮಾನ ಪತನಗೊಂಡಿದ್ದು, ಅದರ ಪೈಲಟ್‌ ಕಾಣೆಯಾಗಿದ್ದರು.

ಪೈಲಟ್‌ ನಮ್ಮ ವಶದಲ್ಲಿರುವುದಾಗಿ ಪಾಕಿಸ್ತಾನ ಹೇಳಿದ್ದು, ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ವ್ಯವಹಾರಗಳ ವಕ್ತಾರರವೀಶ್‌ ಕುಮಾರ್‌, ನಮ್ಮ ವಿಮಾನ ಪತನವಾಗಿದ್ದು ಪೈಲೆಟ್‌ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಶದಲ್ಲಿರುವ ವಿಂಗ್ ಕಮಾಂಡರ್‌ ಅವರನ್ನು ಸುರಕ್ಷಿತವಾಗಿ ವಾಪಸ್‌ ಕಳುಹಿಸಬೇಕೆಂದು ಪಾಕಿಸ್ತಾನಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.