ನವದೆಹಲಿ: ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಬರೆದಿರುವ ಹಿಂದುತ್ವದ ಕುರಿತಾದ 'ಸನ್ರೈಸ್ ಓವರ್ ಅಯೋಧ್ಯ’ಪುಸ್ತಕದ ಉಲ್ಲೇಖಗಳ ವಿರುದ್ಧ ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಖುರ್ಷಿದ್ ಅವರು ಬರೆದಿರುವ, ಇತ್ತೀಚೆಗೆ ಬಿಡುಗಡೆಯಾದ‘ಸನ್ರೈಸ್ ಓವರ್ ಅಯೋಧ್ಯ; ನ್ಯಾಶನಲ್ಹುಡ್ ಇನ್ ಅವರ್ ಟೈಮ್ಸ್’ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಂ ಮೂಲಭೂತವಾದಿ ಸಂಘಟನೆಗಳಾದ ಐಸಿಸ್, ಬೊಕೊ ಹರಾಮ್ ಸಂಘಟನೆಗಳಿಗೆ ಹೋಲಿಕೆ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
ಪುಸ್ತಕದ ಪುಟ ಸಂಖ್ಯೆ 113ರಲ್ಲಿರುವ ‘ಸ್ಯಾಫ್ರೋನ್ ಸ್ಕೈ’ಅಧ್ಯಾಯದಲ್ಲಿ, 'ಸನಾತನ ಧರ್ಮ ಮತ್ತು ಋಷಿಗಳು ಹಾಗೂ ಸಂತರನ್ನೊಳಗೊಂಡ ಶಾಸ್ತ್ರೀಯ ಹಿಂದೂ ಧರ್ಮವನ್ನು ಹಿಂದುತ್ವದ ದೃಢವಾದ ಆವೃತ್ತಿಯಿಂದ ಪಕ್ಕಕ್ಕೆ ತಳ್ಳಲಾಗುತ್ತಿದೆ. ಈ ಎಲ್ಲಾ ಮಾನದಂಡಗಳ ಮೂಲಕ ಹಿಂದುತ್ವ, ಐಸಿಸ್ ಮತ್ತು ಬೊಕೊ ಹರಾಮ್ನಂತಹ ಗುಂಪುಗಳ ಜಿಹಾದಿಸ್ಟ್ ಇಸ್ಲಾಂ ಅನ್ನು ಹೋಲುವ ರಾಜಕೀಯ ಆವೃತ್ತಿಯಾಗಿದೆ ಎಂದು ಬರೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದು ಶಾಂತಿ ಕದಡುವ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಯತ್ನವಾಗಿದೆ ಎಂದು ವಕೀಲರು ದೂರಿನಲ್ಲಿ ಹೇಳಿದ್ದಾರೆ.
ನಮ್ಮ ಸಂವಿಧಾನವು ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ, ವಿವಿಧ ಧರ್ಮ, ಜಾತಿಗಳಿಂದ ಕೂಡಿರುವ ಈ ದೇಶದಲ್ಲಿ ಈ ಹಕ್ಕಿನ ದುರ್ಬಳಕೆಯಿಂದ ದೇಶದ ಗೌರವ ಮತ್ತು ಸೌಹಾರ್ದತೆಗೆ ಆಗುತ್ತಿರುವ ಧಕ್ಕೆ ವಿವರಣೆಗೆ ಮೀರಿದ್ದಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.