ದೆಹಲಿ: ಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿಯ ವೇಳೆ ಭಾರತದ ತ್ರಿವರ್ಣ ಧ್ವಜ ಹಿಡಿದಿದ್ದ ಭಾರತ ಮೂಲದ ವಿನ್ಸೆಂಟ್ ಕ್ಸೇವಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿಯ ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಲಾಗಿದೆ.
ತ್ರಿವರ್ಣ ಧ್ವಜ ದುರ್ಬಳಕೆ ವಿಚಾರವಾಗಿ ದೀಪಕ್ ಕೆ ಸಿಂಗ್ ಎಂಬುವವರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, 'ಘಟನೆಯ ತನಿಖೆ ನಡೆಸಬೇಕು ಎಂದು ನಾನು ದೆಹಲಿ ಪೊಲೀಸರಲ್ಲಿ ಮನವಿ ಮಾಡುತ್ತೇನೆ. ಪ್ರತಿಭಟನೆಯ ವೇಳೆ ತ್ರಿವರ್ಣ ಧ್ವಜ ಹಿಡಿದಿದ್ದ ವ್ಯಕ್ತಿಯ ಮೇಲೆ ನನಗೆ ವೈಯಕ್ತಿಯ ದ್ವೇಷವೇನೂ ಇಲ್ಲ. ಆದರೆ, ಆತನ ಕೃತ್ಯವು ಭಾರತ ಮತ್ತು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ. ಇದು ದೇಶದ್ರೋಹ,' ಎಂದಿದ್ದಾರೆ.
'ಸಾಮಾಜಿಕ ತಾಣಗಳಾದ ಫೇಸ್ಬುಕ್ ಮತ್ತು ಟ್ವಿಟರ್ ವಿನ್ಸೆಂಟ್ ಕ್ಸೇವಿಯರ್ ಅವರ ಖಾತೆಗಳನ್ನು ಅಮಾನತು ಮಾಡಬೇಕು. ಭಾರತ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು,' ಎಂದು ದೀಪಕ್ ಕೆ.ಸಿಂಗ್ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.