ನವದೆಹಲಿ: ₹5.8 ಲಕ್ಷ ಕೋಟಿ ಬ್ಯಾಂಕ್ ಸಾಲ ಏಕೆ ಮನ್ನಾ ಮಾಡಲಾಯಿತು? ಕಾರ್ಪೊರೇಟ್ ತೆರಿಗೆ ₹ 1.45 ಲಕ್ಷ ಕೋಟಿಯಷ್ಟು ಕಡಿಮೆಯಾಗಿರುವುದೇಕೆ? ಎಂದು ಕಾಂಗ್ರೆಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದೆ.
ಉಚಿತ ಕೊಡುಗೆಗಳ ಸಂಸ್ಕೃತಿ ಕೊನೆಗೊಳಿಸುವುದಾಗಿ ಮೋದಿ ಅವರು ಇತ್ತೀಚೆಗೆ ನೀಡಿದ ಹೇಳಿಕೆ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ವಕ್ತಾರ ಗೌರವ್ ವಲ್ಲಭ್ ಅವರು,ದೊಡ್ಡ ಕಾರ್ಪೊರೇಟ್ ಕಂಪನಿಗಳ ಸಾಲ ಮನ್ನಾ ಮತ್ತು ಕಾರ್ಪೊರೇಟ್ ತೆರಿಗೆ ಇಳಿಕೆ ಬಗ್ಗೆ ಚರ್ಚೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ಬ್ಯಾಂಕುಗಳು ನೀಡಿರುವ ಸಾಲದಲ್ಲಿ ₹5.8 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಶ್ರೀಮಂತ ಸ್ನೇಹಿತರಿಗೆ ನೀಡಿರುವ ಉಚಿತ ಕೊಡುಗೆಗಳ ಬಗ್ಗೆ ಯಾವಾಗ ಚರ್ಚಿಸುವುದು ಎಂದು ಕಿಡಿಕಾರಿದ್ದಾರೆ.
‘ಶ್ರೀಮಂತ ಸ್ನೇಹಿತರಿಗೆ ಕಡಿಮೆ ತೆರಿಗೆ, ಸಾಲ ಮನ್ನಾ, ತೆರಿಗೆ ವಿನಾಯಿತಿಯಂತಹ ‘ಅತ್ಯಗತ್ಯ ಉತ್ತೇಜನ’ಗಳನ್ನು ಕೊಡುವಾಗ, ಬಡವರಿಗೆ ಸಣ್ಣ ಪ್ರಮಾಣದಲ್ಲಿ ನೆರವಾಗುವಂತಹ ಆಹಾರ ಭದ್ರತಾ ಕಾಯ್ದೆ, ರೈತರಿಗೆ ಎಂಎಸ್ಪಿ, ಮಹಾತ್ಮಗಾಂಧಿ ನರೇಗಾ ಮತ್ತು ಮಧ್ಯಾಹ್ನದ ಬಿಸಿಯೂಟದಂತಹ ಯೋಜನೆಗಳಿಗೆ ಸಣ್ಣ ಮೊತ್ತ ನೀಡುವುದು ಸರಿಯಲ್ಲ’ ಎಂದು ಅವರು ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.