ADVERTISEMENT

ಭ್ರಷ್ಟಾಚಾರ ಆರೋಪ : ಕೇರಳ ಸಚಿವಾಲಯದ ಎದುರು ಯುಡಿಎಫ್‌ ಪ್ರತಿಭಟನೆ

ಪಿಟಿಐ
Published 20 ಮೇ 2023, 14:50 IST
Last Updated 20 ಮೇ 2023, 14:50 IST
ಸಚಿವಾಲಯದ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುಡಿಎಫ್‌ ಬೆಂಬಲಿಗರು–ಪಿಟಿಐ ಚಿತ್ರ
ಸಚಿವಾಲಯದ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯುಡಿಎಫ್‌ ಬೆಂಬಲಿಗರು–ಪಿಟಿಐ ಚಿತ್ರ   

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಖಂಡಿಸಿ ಕಾಂಗ್ರೆಸ್‌ ಮುಂದಾಳತ್ವದ ಯುಡಿಎಫ್‌ ಮೈತ್ರಿಕೂಟವು ಶನಿವಾರ ಕೇರಳ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದೆ. 

ಸರ್ಕಾರವು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಎಲ್‌ಡಿಎಫ್‌, ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದರ ಬೆನ್ನಲ್ಲೇ ಯುಡಿಎಫ್‌ ಪ್ರತಿಭಟನೆ ಕೈಗೊಂಡಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾರ್ಯಕರ್ತರು ಆಡಳಿತಾರೂಢ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಯುಡಿಎಫ್‌ ಮೈತ್ರಿಕೂಟದ ಪ್ರಮುಖ ನಾಯಕರು ಹಾಗೂ ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ‘ಭ್ರಷ್ಟಾಚಾರದಲ್ಲಿ ಮುಳುಗಿರುವ ಎಲ್‌ಡಿಎಫ್‌ ಸರ್ಕಾರವು ಆಡಳಿತದಲ್ಲಿ ಮುಂದುವರಿಯುವ ನೈತಿಕತೆಯನ್ನೇ ಕಳೆದುಕೊಂಡಿದೆ’ ಎಂದು ಪ್ರತಿಭಟನನಿರತರು ದೂರಿದ್ದಾರೆ. 

ADVERTISEMENT

‘ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರವು ರಾಜ್ಯದ ಜನರನ್ನು ಸಂಕಷ್ಟಕ್ಕೆ ದೂಡಿದ್ದು, ಅವರಿಗೆ ನೋವನ್ನಷ್ಟೇ ನೀಡಿದೆ. ಎರಡನೇ ವರ್ಷದ ಸಂಭ್ರಮಾಚರಣೆ ಕೈಗೊಳ್ಳುವ ಯಾವ ನೈತಿಕತೆಯೂ ಈ ಸರ್ಕಾರಕ್ಕೆ ಇಲ್ಲ’ ಎಂದು ಆರೋಪಿಸಿದ್ದಾರೆ. 

ಪಿಣರಾಯಿ ಸರ್ಕಾರದ ಜನವಿರೋಧಿ ನೀತಿಗಳು, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಕುರಿತ ಆರೋಪ ಪಟ್ಟಿಯನ್ನು ಯುಡಿಎಫ್‌ ಇದೇ ವೇಳೆ ಬಿಡುಗಡೆ ಮಾಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.