ನವದೆಹಲಿ: ಸೋಮವಾರ ಅಂತರರಾಷ್ಟ್ರೀಯ ಶೂಟರ್ ಒಬ್ಬರುಮಾಡಿರುವ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ. ಈ ಮೂಲಕ ಸತ್ಯ ಹೊರಬರಲು ತನಿಖೆ ನಡೆಸಬೇಕೆಂದೂ ಪಕ್ಷ ಒತ್ತಾಯಿಸಿದೆ.
ಸ್ಮೃತಿ ಇರಾನಿ ವಿರುದ್ಧದ ಆರೋಪಗಳು ಅತ್ಯಂತ ಗಂಭೀರವಾದುದ್ದಾಗಿವೆ. ಹಾಗಾಗಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಾದರೆ ಪ್ರಧಾನಮಂತ್ರಿ ನರೇಂದ್ರಮೋದಿ, ಪ್ರಕರಣ ಕುರಿತಂತೆ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆದೇಶಬೇಕು ಎಂದು ಕಾಂಗ್ರೆಸ್ನ ಪ್ರಧಾನ ವಕ್ತಾರ ರಂದೀಪ್ ಸುರ್ಜೇವಾಲಾ ಮಾಧ್ಯಮಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಕೇಂದ್ರ ಮಹಿಳಾ ಆಯೋಗದ ಸದಸ್ಯೆಯಾಗಿ ನೇಮಕ ಮಾಡಲು ಕೇಂದ್ರ ಜವಳಿ ಖಾತೆ ಸಚಿವರ ಜೊತೆ ಮತ್ತಿಬ್ಬರು ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅಂತರರಾಷ್ಟ್ರೀಯ ಶೂಟರ್ ಖ್ಯಾತಿಯ ವರ್ತಿಕಾ ಸಿಂಗ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಉತ್ತರ ಪ್ರದೇಶದ ಸುಲ್ತಾನಪುರದ ಜನಪ್ರತಿನಿಧಿಗಳ ನ್ಯಾಯಾಲಯವು ಜನವರಿ 2 ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ, ಬಳಿಕ, ಪ್ರಕರಣವು ತನ್ನ ವ್ಯಾಪ್ತಿಗೆ ಒಳಪಡುತ್ತದೆಯೇ ಎಂದು ಕೋರ್ಟ್ ನಿರ್ಧರಿಸುತ್ತದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಅವರನ್ನು ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿದ್ದು, ಈ ಬಗ್ಗೆರಾಷ್ಟ್ರೀಯ ಮಹಿಳಾ ಆಯೋಗದ ಉಲ್ಲೇಖವಾಗಿದೆ ಎಂದು ಇರಾನಿಗೆ ಹತ್ತಿರದ ಜನರು ಆಕೆಗೆ ನಕಲಿ ಪತ್ರವೊಂದನ್ನು ನೀಡಿರುವುದಾಗಿ ಶೂಟರ್ ಆರೋಪಿಸಿದ್ದಾರೆ.
ಸ್ಕೃತಿ ಇರಾನಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಒಂದೊಮ್ಮೆ ಯುಪಿಎ ಸರ್ಕಾರವಿದ್ದಾಗ ನಮ್ಮ ಸಚಿವರ ಮೇಲೆ ಇಂತಹ ಆರೋಪ ಕೇಳಿಬಂದಿದ್ದರೆ ಇರಾನಿ, ಕಾಂಗ್ರೆಸ್ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದರು ಎಂದು ಸುರ್ಜೇವಾಲಾ ಹೇಳಿದ್ದಾರೆ.
"ಸ್ಮೃತಿ ಇರಾನಿ ರಾಜೀನಾಮೆ ಕೊಟ್ಟು ಸ್ವತಂತ್ರ ತನಿಖೆ ಎದುರಿಸಬೇಕು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಕೆಯ ರಾಜೀನಾಮೆ ಕೇಳಬೇಕು. ಒಬ್ಬ ಅಂತರರಾಷ್ಟ್ರೀಯ ಶೂಟರ್ ಆರೋಪ ಮಾಡಿದರೂ ಈ ಕುರಿತಂತೆ ಮೋದಿ ಯಾಕೆ ಸ್ವತಂತ್ರ ತನಿಖೆಗೆ ಆದೇಶಿಸಿಲ್ಲ," ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.