ಕಾಂಗ್ರೆಸ್ ಬಿಜೆಪಿ ಜೆಡಿಎಸ್
ನವದೆಹಲಿ: ಡಿಸೆಂಬರ್ 13, 14ರಂದು ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆ ನಡೆಯಲಿದ್ದು, ಸದನದಲ್ಲಿ ಹಾಜರಿರುವಂತೆ ಸೂಚಿಸಿ ಸಂಸದರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೂರು ಸಾಲುಗಳ ವಿಪ್ ಜಾರಿ ಮಾಡಿವೆ.
‘ಸಂವಿಧಾನ ಅಳವಡಿಸಿಕೊಂಡು 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 13, 14ರಂದು ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆ ನಡೆಯಲಿದೆ. ಬಿಜೆಪಿಯ ಎಲ್ಲ ಸದಸ್ಯರು ಹಾಜರಿದ್ದು, ಸರ್ಕಾರದ ನಿಲುವನ್ನು ಬೆಂಬಲಿಸುವಂತೆ ಕೋರಲಾಗಿದೆ’ಎಂದು ಬಿಜೆಪಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡು ದಿನ ಸಂವಿಧಾನ ಕುರಿತು ನಡೆಯಲಿರುವ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 16ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಚರ್ಚೆ ಆರಂಭಿಸಲಿದ್ದಾರೆ.
ಡಿಸೆಂಬರ್ 13ರಂದು ಸದನದಲ್ಲಿ ಸಂವಿಧಾನ ಕುರಿತ ಚರ್ಚೆ ನಡೆಯಬೇಕು. ಹಾಗಾಗಿ, ಸದನದ ಕಲಾಪ ಸುಗಮವಾಗಿ ನಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಮಧಿ ಸಹ ಹೇಳಿದ್ದರು.
‘ನಾನು ಲೋಕಸಭಾ ಸದಸ್ಯರನ್ನು ಭೇಟಿ ಮಾಡಿ ತನ್ನ ವಿರುದ್ಧ ಬಿಜೆಪಿ ಸಂಸದರು ಮಾಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಕಡತದಿಂದ ತೆಗೆಯಬೇಕೆಂದು ಕೋರಿದೆ. ಆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ಹೇಳಿದ್ದಾರೆ. ನಮ್ಮ ಉದ್ದೇಶ ಸದನದ ಕಲಾಪ ಸುಗಮವಾಗಿ ನಡೆಯಬೇಕು. ಸಂವಿಧಾನ ಕುರಿತು ಚರ್ಚೆಆಗಬೇಕು’ ಎಂದು ಬುಧವಾರ ಹೇಳಿದ್ದರು.
ಅದಾನಿ ಪ್ರಕರಣಗಳ ಕುರಿತಾದ ಚರ್ಚೆಯನ್ನು ವಿಷಯಾಂತರ ಮಾಡಲು ಬಿಜೆಪಿ ಸದಸ್ಯರು ನನ್ನ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.