ADVERTISEMENT

ಜೆಇಇ, ನೀಟ್ ಮುಂದೂಡಲು ಕಾಂಗ್ರೆಸ್ ಒತ್ತಾಯ

ಕೇಂದ್ರ ಶಿಕ್ಷಣ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು

ಪಿಟಿಐ
Published 28 ಆಗಸ್ಟ್ 2020, 18:46 IST
Last Updated 28 ಆಗಸ್ಟ್ 2020, 18:46 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ/ಚಂಡೀಗಡ (ಪಿಟಿಐ): ಜೆಇಇ ಮತ್ತು ನೀಟ್ ಪರೀಕ್ಷೆಯನ್ನು ಮುಂದೂಡಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಯುವ ಘಟಕಗಳು ಶುಕ್ರವಾರ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದವು.

ಹರಿಯಾಣದ ವಿವಿಧೆಡೆ ಪ್ರತಿಭಟನೆ ನಡೆದಿದ್ದು ಕಾರ್ಯಕರ್ತರು ಭಿವಾನಿಯಲ್ಲಿ ಕೇಂದ್ರ ಶಿಕ್ಷಣ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಸ್ಥಿತಿಯಲ್ಲೂ ಪರೀಕ್ಷೆ ನಡೆಸುವ ಆತುರ ಏಕೆ ಎಂದು ಪ್ರಶ್ನಿಸಿದರು. ರಾಜಸ್ಥಾನದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಸಾರಿಗೆ ಸಚಿವ ಪ್ರತಾಪ್ ಸಿಂಗ್ ಕಚಾರಿಯವಸ್ ವಹಿಸಿದ್ದು, ವಿವಿಧ ಮುಖಂಡರು ಭಾಗವಹಿಸಿದ್ದರು. ಲಕ್ಷಾಂತರ ಮಂದಿ ಯುವಕರ ಆರೋಗ್ಯವನ್ನು ಬದಿಗೊತ್ತಿ ಕೇಂದ್ರ ಪರೀಕ್ಷೆಯನ್ನು ನಡೆಸುವ ಹಟ ತೊಟ್ಟಂತಿದೆ. ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

‘ವಿದ್ಯಾರ್ಥಿಗಳ ಜೊತೆಗೂ ಚರ್ಚಿಸಿ’

ADVERTISEMENT

ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನುನಡೆಸುವ ನಿರ್ಧಾರ ಕುರಿತಂತೆ ವಿದ್ಯಾರ್ಥಿಗಳ ಜೊತೆಗೂ ಚರ್ಚಿಸಿ ಸಹಮತಕ್ಕೆ ಬರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮುಖಂಡ ರಾಹುಲ್ ಗಾಂಧಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಪ್ರತ್ಯೇಕವಾಗಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಿ ವಿವಿಧ ಪಕ್ಷಗಳು ಕೋವಿಡ್ ಸ್ಥಿತಿ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲುಆಗ್ರಹಪಡಿಸಿವೆ. ಆದರೆ, ವಿರೋಧದ ನಡುವೆಯೂ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪರೀಕ್ಷೆ ಮುಂದೂಡಲು ಒತ್ತಾಯಿಸಿ ಕಾಂಗ್ರೆಸ್ ದಿನಪೂರ್ತಿ ಅಭಿಯಾನ ನಡೆಸಿತು. ಇದರ ಅಂಗವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳನ್ನು ಬೆಂಬಲಿಸುವ ವಿಡಿಯೊ ಹಂಚಿಕೊಂಡಿದ್ದಾರೆ.

‘ನೀವು ಪ್ರಮುಖ ಬೇಡಿಕೆ ಕುರಿತಂತೆ ಹೋರಾಟ ನಡೆಸುತ್ತಿದ್ದೀರಿ. ಇದು, ನಿಮಗಷ್ಟೇ ಅಲ್ಲ, ನಿಮ್ಮ ಕುಟುಂಬದ ದೃಷ್ಟಿಯಿಂದಲೂ ಮುಖ್ಯವಾದುದು’ ಎಂದು ಸೋನಿಯಾಗಾಂಧಿ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.