ಜಾಮ್ನಗರ್:ಹಿಂದೂ ಸೇನಾ ಸಂಘಟನೆ ಸ್ಥಾಪಿಸಿದ್ದ ನಾಥೂರಾಮ್ ಗೋಡ್ಸೆ ಪ್ರತಿಮೆಯನ್ನು ಜಾಮನಗರ ಕಾಂಗ್ರೆಸ್ ಅಧ್ಯಕ್ಷ ದಿಗುಧಾ ಜಡೇಜಾ ಮತ್ತು ಸಹಚರರು ಮಂಗಳವಾರ ಧ್ವಂಸಗೊಳಿಸಿದ್ದಾರೆ.
ಜಾಮನಗರದಲ್ಲಿಗೋಡ್ಸೆ ಪ್ರತಿಮೆಯನ್ನುಇರಿಸಲು ನಿರ್ಧರಿಸಿರುವುದಾಗಿ ಹಿಂದೂ ಸೇನಾ ಆಗಸ್ಟ್ನಲ್ಲಿ ಪ್ರಕಟಿಸಿತ್ತು. ಆದರೆ, ಇದಕ್ಕಾಗಿಜಾಗ ನೀಡಲು ಸ್ಥಳೀಯ ಆಡಳಿತ ನಿರಾಕರಿಸಿತ್ತು.ಗೋಡ್ಸೆ ಪುಣ್ಯಸ್ಮರಣೆ (ನ.15) ಅಂಗವಾಗಿ ಪ್ರತಿಮೆಯನ್ನು ಹನುಮಾನ್ ಆಶ್ರಮದ ಬಳಿ ನಿಲ್ಲಿಸಿದ್ದ ಸಂಘಟನೆ ಸದಸ್ಯರು, ‘ನಾಥುರಾಮ್ ಗೋಡ್ಸೆ ಅಮರವಾಗಲಿ‘ ಎಂದು ಘೋಷಣೆಗಳನ್ನು ಕೂಗಿದ್ದರು.
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ಗೋಡ್ಸೆಯನ್ನು 1949ರಲ್ಲಿ ಹರಿಯಾಣದ ಅಂಬಾಲ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು. ಅದೇ ಕಾರಾಗೃಹದಮಣ್ಣಿನಿಂದ ಗೋಡ್ಸೆ ಪ್ರತಿಮೆ ನಿರ್ಮಿಸುವುದಾಗಿ ಹಿಂದೂ ಮಹಾಸಭಾ ಸೋಮವಾರ ಹೇಳಿತ್ತು.
‘ಗೋಡ್ಸೆ ಮತ್ತು ನಾರಾಯಣ ಆಪ್ಟೆಯನ್ನು ಗಲ್ಲಿಗೇರಿಸಿದ್ದ ಅಂಬಾಲ ಜೈಲಿನಿಂದ ಮಹಾಸಭಾ ಕಾರ್ಯಕರ್ತರು ಕಳೆದ ವಾರ ಮಣ್ಣು ತಂದಿದ್ದಾರೆ. ಈ ಮಣ್ಣನ್ನು ಗೋಡ್ಸೆ ಮತ್ತು ಆಪ್ಟೆ ಪ್ರತಿಮೆ ನಿರ್ಮಿಸಲು ಬಳಸಲಾಗುವುದು. ಅವುಗಳನ್ನು (ಪ್ರತಿಮೆಗಳನ್ನು) ಮಹಾಸಭಾದ ಕಚೇರಿ ಇರುವ ಗ್ವಾಲಿಯರ್ನಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜೈವೀರ್ ಭಾರದ್ವಾಜ್ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.