ADVERTISEMENT

ಅಯೋಧ್ಯೆ ಕಾರ್ಯಕ್ರಮ, ಗಣರಾಜ್ಯೋತ್ಸವ: ನೋಯ್ಡಾದಲ್ಲಿ 6 ದಿನ ನಿಷೇಧಾಜ್ಞೆ ಜಾರಿ

ಪಿಟಿಐ
Published 20 ಜನವರಿ 2024, 10:22 IST
Last Updated 20 ಜನವರಿ 2024, 10:22 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

–ಪಿಟಿಐ

ನೋಯ್ಡಾ (ಉತ್ತರ ಪ್ರದೇಶ): ನೋಯ್ಡಾ ಹಾಗೂ ಗ್ರೇಟರ್‌ ನೋಯ್ಡಾ ಪ್ರದೇಶದಲ್ಲಿ ಜನವರಿ 21ರಿಂದ 26ರ ವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗುವುದು ಎಂದು ಗೌತಮ ಬುದ್ಧ ನಗರ ಪೊಲೀಸರು ಶನಿವಾರ ತಿಳಿಸಿದ್ದಾರೆ.

ADVERTISEMENT

ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ದಿನದ ಅಂಗವಾಗಿ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 144ರ ಅಡಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಅನುಮತಿ ಇಲ್ಲದೆ ಪ್ರದರ್ಶನ, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಹೃದೇಶ್‌ ಕಠಾರಿಯಾ ಹೇಳಿದ್ದಾರೆ.

'ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರಪ್ರಸಾರ ಜನವರಿ 22ರಂದು ನಿಗದಿಯಾಗಿದೆ. ಜನವರಿ 25ರಂದು ಹಜರತ್‌ ಅಲಿ ಜನ್ಮದಿನ, ಜನವರಿ 26ರಂದು ಗಣರಾಜ್ಯೋತ್ಸವ ನಡೆಯಲಿದೆ. ಇದೇ ವೇಳೆ ಪ್ರತಿಭಟನೆ, ಮೆರವಣಿಗೆ ನಡೆಸಲು ಕೆಲವು ಸಂಘಟನೆಗಳು ಅನುಮತಿ ಕೋರಿವೆ' ಎಂದು ಕಠಾರಿಯಾ ತಿಳಿಸಿದ್ದಾರೆ.

ಹೀಗಾಗಿ, ಸಮಾಜಘಾತುಕ ಶಕ್ತಿಗಳಿಂದ ಶಾಂತಿ–ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಧಿಕೃತ ಕಾರ್ಯಕ್ರಮಗಳು ಸುರಕ್ಷಿತವಾಗಿ ನಡೆಯಲು ಅನುಕೂಲವಾಗುವಂತೆ ಸೂಕ್ತ ತಯಾರಿ ನಡೆಸಲಾಗುತ್ತಿದೆ. ಗೌತಮ ಬುದ್ಧ ನಗರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ಸಲುವಾಗಿ ಹೊರಡಿಸಿರುವ ಈ ಆದೇಶ ಆರು ದಿನಗಳವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.