ADVERTISEMENT

ಧರ್ಮಗಳ ನಡುವೆ ದ್ವೇಷ ಬಿತ್ತುವುದನ್ನು ‘ರಾಷ್ಟ್ರ ಅಪರಾಧ’ ಎಂದು ಪರಿಗಣಿಸಿ: ಜಮೈತ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 11:40 IST
Last Updated 13 ಫೆಬ್ರುವರಿ 2023, 11:40 IST
ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಪಸ್ಮಾಂದಾ ಮುಸ್ಲಿಮರ 34ನೇ ಸಾಮಾನ್ಯ ಸಭೆಯಲ್ಲಿ ಜೈಮೈತ್‌ ಅಧ್ಯಕ್ಷ ಮೌಲಾನ ಮಹಮೂದ್‌ ಮದನಿ ಅವರು ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದರು  –ಪಿಟಿಐ ಚಿತ್ರ
ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ಪಸ್ಮಾಂದಾ ಮುಸ್ಲಿಮರ 34ನೇ ಸಾಮಾನ್ಯ ಸಭೆಯಲ್ಲಿ ಜೈಮೈತ್‌ ಅಧ್ಯಕ್ಷ ಮೌಲಾನ ಮಹಮೂದ್‌ ಮದನಿ ಅವರು ಸಭೆ ಉದ್ದೇಶಿಸಿ ಭಾನುವಾರ ಮಾತನಾಡಿದರು  –ಪಿಟಿಐ ಚಿತ್ರ   

ನವದೆಹಲಿ: ಧರ್ಮಗಳ ಮಧ್ಯೆ ಬಿರುಕು ಮೂಡಿಸಲು ನಡೆಸುವ ಯತ್ನವನ್ನು ‘ರಾಷ್ಟ್ರ ಅಪರಾಧ’ ಎಂದು ಪರಿಗಣಿಸಬೇಕು ಎಂದು ಜಮೈತ್‌ ಉಲೇಮಾ–ಇ–ಹಿಂದ್‌ ಭಾನುವಾರ ಅಭಿಪ್ರಾಯಪಟ್ಟಿದೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಪಸ್ಮಾಂದಾ ಮುಸ್ಲಿಮರ 34ನೇ ಸಾಮಾನ್ಯ ಸಭೆಯಲ್ಲಿ ಜಮೈತ್‌ ಅಧ್ಯಕ್ಷ ಮೌಲಾನ ಮಹಮೂದ್‌ ಮದನಿ ಅವರು ಸಭೆ ಉದ್ದೇಶಿಸಿ ಓದಿದ ಸಂದೇಶದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ.

‘ಧರ್ಮಗಳ ನಡುವೆ ದ್ವೇಷ, ಪಂಥಾಭಿಮಾನವು ನಮ್ಮ ದೇಶದ ಸಮಗ್ರತೆಗೆ ಧಕ್ಕೆ ತರುತ್ತದೆ. ಇದು ನಮ್ಮ ದೇಶದ ಸುದೀರ್ಘ ಪರಂಪರೆಗೆ ಮತ್ತು ಮೌಲ್ಯಗಳಿಗೆ ಸರಿಹೊಂದುವುದಿಲ್ಲ ಎಂದು ಜಮೈತ್‌ ಉಲೇಮಾ–ಇ–ಹಿಂದ್‌ ನಂಬಿದೆ’ ಎಂದರು.

ADVERTISEMENT

ಧರ್ಮದ ಒಳಗಿನ ಮತ್ತು ಹೊರಗಿನ ಶತ್ರುಗಳ ಕುರಿತು ಎಚ್ಚರದಿಂದ ಇರಲು ಮುಸ್ಲಿಮರಿಗೆ ಸಲಹೆ ನೀಡಿದ ಅವರು, ಜಿಹಾದ್ ಹೆಸರಿನಲ್ಲಿ ತೀವ್ರಗಾಮಿತ್ವ ಮತ್ತು ಹಿಂಸೆಗೆ ಪ್ರಚೋದಿಸುವ ಸಂಘಟನೆಗಳಿಗೆ ಬೆಂಬಲ ನೀಡಬಾರದು. ದೇಶಕ್ಕೆ ನಿಷ್ಠರಾಗಿರುವುದು ಮತ್ತು ದೇಶಭಕ್ತಿಯು ನಮ್ಮ ಧರ್ಮದ ಕರ್ತವ್ಯವಾಗಿದೆ ಎಂದರು.

ಪಸ್ಮಾಂದಾ ಮುಸ್ಲಿಂ ಸಮುದಾಯವನ್ನು ತಲುಪುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದ ಸೂಚನೆಯನ್ನು ಸ್ವಾಗತಿಸಿರುವುದಾಗಿ ಮದನಿ ಹೇಳಿದರು. ಈ ಸಮುದಾಯದ ಕಲ್ಯಾಣಕ್ಕೆ ಕಾರ್ಯಕ್ರಮ ರೂಪಿಸುವುದಾಗಿ ಕೇಂದ್ರ ಸರ್ಕಾರ ನೀಡಿರುವ ಹೇಳಿಕೆಗಾಗಿ ಸರ್ಕಾರವನ್ನು ಅಭಿನಂದಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.