ನವದೆಹಲಿ: ಪೊಲೀಸ್ ಕಾನ್ಸ್ಟೆಬಲ್ ಒಬ್ಬರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬೆಂಕಿ ಅವಘಡದಲ್ಲಿ ಕಟ್ಟಡವೊಂದರ ಟೆರೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಿರಿಯ ನಾಗರಿಕ ದಂಪತಿಯನ್ನು ರಕ್ಷಿಸಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ..
ಗ್ರೇಟರ್ ಕೈಲಾಶ್ನಲ್ಲಿರುವ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಕಟ್ಟಡಕ್ಕೆ ಪ್ರವೇಶಿಸುವ ಮುಖ್ಯ ಗೇಟ್ ಲಾಕ್ ಆಗಿತ್ತು. ಕಟ್ಟಡದಲ್ಲಿ 90 ವರ್ಷ ಮೇಲ್ಪಟ್ಟ ವೃದ್ಧ ದಂಪತಿ ಇದ್ದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸ್ ಕಾನ್ಸ್ಟೇಬಲ್ ವಿಕ್ರಮ್, ಸಮೀಪದ ಅಂಗಡಿಯಿಂದ ಸುತ್ತಿಗೆಯನ್ನು ತಂದು ಬೀಗವನ್ನು ಮುರಿದು ಅಗ್ನಿಶಾಮಕ ದಳ ನೇರವಾಗಿ ಪ್ರವೇಶಿಸಿ ಬೆಂಕಿ ನಂದಿಸಲು ನೆರವಾದರು. ಬಳಿಕ ಅವರ ಮನೆಗೆ ಸಂಪರ್ಕ ಕೊಟ್ಟಿದ್ದ ನೈಸರ್ಗಿಕ ಅನಿಲದ ಸರಬರಾಜನ್ನು ಕಡಿತಗೊಳಿಸಿ ಹೆಚ್ಚಿನ ಅನಾಹುತವಾಗದಂತೆ ನೋಡಿಕೊಂಡಿದ್ದಾರೆ.
ಹೆಗಲ ಮೇಲೆ ಹೊತ್ತು ತಂದ ಪೊಲೀಸ್ ಪೇದೆ:
ಈ ಸಂದರ್ಭ ಬೆಂಕಿ ಹೊತ್ತಿ ಉರಿಯುತ್ತಿದ್ದ ಮನೆಯ ಟೆರೇಸ್ನಲ್ಲಿ ಸಿಕ್ಕಿಬಿದ್ದ ಸುಮಾರು 90 ವರ್ಷ ವಯಸ್ಸಿನ ವೃದ್ಧ ದಂಪತಿ ಬಗ್ಗೆ ಸ್ಥಳದಲ್ಲಿ ನೆರೆದಿದ್ದ ಜನ ವಿಕ್ರಮ್ಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಮಹಡಿ ತಲುಪಿದ ವಿಕ್ರಮ್ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ವೃದ್ಧ ಮಹಿಳೆಯನ್ನು ಹೆಗಲು ಮೇಲೆ ಹೊತ್ತು ಹೊರಗೆ ಕರೆತಂದ ವಿಕ್ರಮ್, ಎರಡನೇ ಮತ್ತು ಮೂರನೇ ಮಹಡಿಯಲ್ಲಿದ್ದ ಜನರನ್ನು ಸ್ಥಳಾಂತರಿಸಲು ನೆರವಾಗಿದ್ದಾರೆ. ತುರ್ತು ಸಂದರ್ಭದಲ್ಲಿ ಪೊಲೀಸ್ ಪೇದೆ ವಿಕ್ರಮ್ ಕಾರ್ಯ ಶ್ಲಾಘನೀಯವಾದುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.