
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗದ ರೆಜಿನಗರದಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಾಣಕ್ಕೆ ಮುಂದಾಗಿರುವ ಟಿಎಂಸಿಯ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಅವರಿಗೆ ಸಾರ್ವಜನಿಕರು ಬುಧವಾರ ಶುಭಕೋರಿದರು –ಪಿಟಿಐ ಚಿತ್ರ
ರೆಜಿನಗರ (ಪಿಟಿಐ): ಅಯೋಧ್ಯೆಯ ಬಾಬರಿ ಮಸೀದಿ ಮಾದರಿಯಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮಸೀದಿ ನಿರ್ಮಾಣ ಕಾರ್ಯಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಬುಧವಾರ ಚಾಲನೆ ನೀಡಿದರು.
ಟಿಎಂಸಿಯಿಂದ ಅಮಾನತುಗೊಂಡ ಬಳಿಕ ಕಬೀರ್ ಅವರು, ಇತ್ತೀಚೆಗೆ ಜನತಾ ಉನ್ನಯನ್ ಪಕ್ಷವನ್ನು (ಜೆಯುಪಿ) ಸ್ಥಾಪಿಸಿದ್ದಾರೆ. ‘ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗದ ರೆಜಿನಗರದಲ್ಲಿ ಸುಮಾರು 50ರಿಂದ 55 ಕೋಟಿ ವೆಚ್ಚದಲ್ಲಿ ಮಸೀದಿ ನಿರ್ಮಾಣಗೊಳ್ಳಲಿದ್ದು, ಎರಡು ವರ್ಷಗಳಲ್ಲಿ ಅದರ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಅವರು ಘೋಷಿಸಿದರು.
ಕಬೀರ್ ಅವರ ಅನೇಕ ಬೆಂಬಲಿಗರು ತಮ್ಮ ತಲೆಯ ಮೇಲೆ ಇಟ್ಟಿಗೆಗಳನ್ನು ಹೊತ್ತುಕೊಂಡು ಮಸೀದಿ ನಿರ್ಮಾಣ ಕಾರ್ಯಕ್ಕೆ ಸಾಥ್ ನೀಡಿದರು.
‘ಮಸೀದಿ ನಿರ್ಮಾಣ ಕಾರ್ಯವನ್ನು ವಿರೋಧಿಸುವವರು ಪಕ್ಕಕ್ಕೆ ಸರಿಯಿರಿ. ಜನರಿಗೆ ತಮ್ಮದೇ ಆದ ಧರ್ಮಗಳನ್ನು ಆಚರಿಸಲು, ದೇಗುಲ, ಚರ್ಚ್ ಅಥವಾ ಬಯಸಿದ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ಸ್ವತಂತ್ರರಿದ್ದಾರೆ. ಇಸ್ಲಾಂ ಹೆಸರಿನಲ್ಲಿ ನಾನು ಯಾರನ್ನೂ ವಿರೋಧಿಸುವುದಿಲ್ಲ. ಅಲ್ಲಾಹನನ್ನು ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದರು.
‘ಈ ಮಸೀದಿ ನಿರ್ಮಾಣ ಕಾರ್ಯವನ್ನು ತಡೆಯಲು ಭೂಮಿ ಮೇಲಿನ ಯಾವುದೇ ಶಕ್ತಿಗಿಲ್ಲ. ದೇವರ ದಯೆಯಿಂದ ಎರಡು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.