ನವದೆಹಲಿ: ದೇಶದಾದ್ಯಂತ ಆತಂಕ ಸೃಷ್ಟಿಸಿರುವ ಹಕ್ಕಿ ಜ್ವರದ ಬಗ್ಗೆ ಗಾಬರಿ ಬೇಡ, ಮನುಷ್ಯರಿಗೆ ರೋಗ ಹರಡದಂತೆ ತಡೆಯಲು ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಿ ಎಂದು ಕೇಂದ್ರದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಸಲಹೆ ನೀಡಿದ್ದಾರೆ.
"ದೇಶದ ಕೆಲ ಭಾಗಗಳಲ್ಲಿ ವಲಸೆ ಮತ್ತು ಕಾಡು ಹಕ್ಕಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಹಾಗಾಗಿ, ಮೊಟ್ಟೆ ಮತ್ತು ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಸಾಧ್ಯವಿರುವ ಎಲ್ಲ ನೆರವನ್ನು ನೀಡಲಾಗಿದ್ದು, ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ," ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಹಕ್ಕಿ ಜ್ವರ ವ್ಯಾಪಿಸಿರುವ ಬಗ್ಗೆ ಗುರುತಿಸಲಾಗಿರುವ 12 ಕೇಂದ್ರ ಸ್ಥಾನಗಳಿರುವ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಕೇರಳ ಮತ್ತು ರಾಜಸ್ತಾನದಲ್ಲಿ ಹಕ್ಕಿ ಜ್ವರ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ 10 ದಿನಗಳಲ್ಲಿ ಲಕ್ಷಾಂತರ ಹಕ್ಕಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದು, ಬಹುತೇಕ ವಲಸೆ ಹಕ್ಕಿಗಳಾಗಿವೆ.
ಈ ಮಧ್ಯೆ, ಹಕ್ಕಿ ಜ್ವರ ಪೀಡಿತ ರಾಜ್ಯಗಳಲ್ಲಿ ಕೋಳಿಗಳನ್ನು ಸಾಮೂಹಿಕವಾಗಿಕೊಲ್ಲುವ ಮತ್ತು ಕುಕುಟೋದ್ಯಮದ ಉತ್ಪನ್ನಗಳ ಬಳಕೆಗೆ ತಡೆ ವಿಧಿಸಲಾಗಿದೆ. ನೆರೆಯ ರಾಜ್ಯಗಳ ಗಡಿಗಳಲ್ಲಿ ತಪಾಸಣೆ, ಸ್ಯಾನಿಟೈಸ್ ಮಾಡಲಾಗುತ್ತಿದೆ.
ಹಕ್ಕಿ ಜ್ವರ ಹರಡುವಿಕೆಯನ್ನು ನಿಯಂತ್ರಿಸಲು, ಮೇಲ್ವಿಚಾರಣೆ ನಡೆಸಲು ಕೇಂದ್ರ ಸರ್ಕಾರವು ನವದೆಹಲಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.