ADVERTISEMENT

ಕೊರೊನಾ: ದೇಶದಲ್ಲಿ 166 ಸಾವು, ಕಳೆದ 24ಗಂಟೆಗಳಲ್ಲಿ ಸಾವಿಗೀಡಾದವರ ಸಂಖ್ಯೆ 17 

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 4:06 IST
Last Updated 9 ಏಪ್ರಿಲ್ 2020, 4:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೊರೊನಾವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಕಳೆದ 24 ಗಂಟೆಗಳಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಕೋವಿಡ್-19 ರೋಗಕ್ಕೆ ಬಲಿಯಾದವರ ಸಂಖ್ಯೆ 166ಕ್ಕೇರಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ಇಲ್ಲಿಯವರೆಗೆ 5,734 ಮಂದಿಗೆ ಸೋಂಕು ತಗುಲಿದೆ. ಸೋಂಕು ಹರಡುವಿಕೆ ಜಾಸ್ತಿಯಾಗಿರುವುದರಿಂದ ಏಪ್ರಿಲ್ 19ರ ನಂತರವೂ ದಿಗ್ಬಂಧನ ಮುಂದುರಿಸುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ. ಹಲವಾರು ನಗರಗಳನ್ನು ಕೋವಿಡ್ ಹಾಟ್‌ಸ್ಪಾಟ್ ಆಗಿ ಗುರುತಿಸಲಾಗಿದ್ದು, ಜನರನ್ನು ಐಸೋಲೇಷನ್ ಮಾಡುವ ಎಲ್ಲ ಪ್ರಯತ್ನ ಮಾಡಲಾಗಿದೆ.

ಮುಖ್ಯಾಂಶಗಳು
- ದೆಹಲಿಯಲ್ಲಿ 20 ನಗರಗಳನ್ನು ಕೊರೊನಾ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.ಈ ಪ್ರದೇಶಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಸಿಸೋಡಿಯಾ ಭರವಸೆ ನೀಡಿದ್ದಾರೆ.

ADVERTISEMENT

- ದೆಹಲಿ, ಮುಂಬೈ, ಚಂಡೀಗಢ, ನಾಗಾಲ್ಯಾಂಡ್ ಮತ್ತು ಒಡಿಶಾದಲ್ಲಿ ಜನರು ಮನೆಯಿಂದ ಹೊರಗೆ ಹೊರಡುವುದಾದರೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ.

-ಮಾಸ್ಕ್ ಧರಿಸುವುದರಿಂದ ಕೊರೊನಾವೈರಸ್ ಹರಡುವಿಕೆಯನ್ನು ತಡೆಯಬಹುದಾಗಿದೆ. ಹಾಗಾಗಿ ಮನೆಯಿಂದ ಹೊರಗೆ ಹೊರಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ.ಬಟ್ಟೆಯಿಂದ ಮಾಡಿದ ಮಾಸ್ಕ್‌ಗಳನ್ನೂ ಬಳಸಬಹುದು ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

- ಸರ್ವ ಪಕ್ಷಗಳ ಮುಖಂಡರೊಂದಿಗೆ ವಿಡಿಯೊ ಸಂವಾದ ನಡೆಸಿದ ಪ್ರಧಾನಿ ಮೋದಿ, ಏಪ್ರಿಲ್ 14ರಂದು ಎಲ್ಲ ನಿರ್ಬಂಧಗಳನ್ನು ಒಮ್ಮೆಗೆ ತೆರವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹಲವಾರು ರಾಜ್ಯಗಳು ಲಾಕ್‌ಡೌನ್ ವಿಸ್ತರಣೆಗೆ ಒಲವು ತೋರಿವೆ.

-ಕೋವಿಡ್‌–19 ಇರುವುದನ್ನು ದೃಢಪಡಿಸಲು ನಡೆಸುವ ಪರೀಕ್ಷೆಯನ್ನು ಖಾಸಗಿ ಪ್ರಯೋಗಾಲಯಗಳು ಉಚಿತವಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.

- ಶಾಲೆ, ಕಾಲೇಜು ಮತ್ತು ಧಾರ್ಮಿಕ ಕೇಂದ್ರಗಳನ್ನು ಇನ್ನೂ ಹೆಚ್ಚು ದಿನಗಳ ಕಾಲ ಮುಚ್ಚಬೇಕು ಎಂದು ಹಲವಾರು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- ಸಾವಿರಾರು ವಲಸೆ ಕಾರ್ಮಿಕರ ಬವಣೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ವ್ಯಾಪಾರಕ್ಕೆ ಬಿದ್ದಿರುವ ಹೊಡೆತದಿಂದಾಗಿ ಲಾಕ್‌ಡೌನ್ ಸಡಿಲ ಮಾಡಲು ಸರ್ಕಾರದ ಮೇಲೆ ಒತ್ತಡವಿದೆ. ಹಾಗಾಗಿ ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳನ್ನು ಹೊರತು ಪಡಿಸಿ ಇತರೆಡೆ ನಿರ್ಬಂಧ ತೆರವುಗೊಳಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.