ADVERTISEMENT

ಕೋವಿಡ್‌ ಮರಣ ಪ್ರಮಾಣವನ್ನು ಶೇ 1ಕ್ಕಿಂತ ಕಡಿಮೆಯಾಗಿಸುವ ಗುರಿ: ಡಾ.ಹರ್ಷವರ್ಧನ್‌

ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವರ ಹೇಳಿಕೆ

ಪಿಟಿಐ
Published 17 ಸೆಪ್ಟೆಂಬರ್ 2020, 11:47 IST
Last Updated 17 ಸೆಪ್ಟೆಂಬರ್ 2020, 11:47 IST
ಡಾ.ಹರ್ಷವರ್ಧನ್‌
ಡಾ.ಹರ್ಷವರ್ಧನ್‌   

ನವದೆಹಲಿ: ‘ದೇಶದಲ್ಲಿ ಪ್ರಸ್ತುತ ಕೋವಿಡ್‌–19 ಮರಣ ಪ್ರಮಾಣ ಶೇ 1.64ರಷ್ಟಿದ್ದು, ಇದು ವಿಶ್ವದಲ್ಲೇ ಅತ್ಯಂತ ಕಡಿಮೆ. ಈ ಪ್ರಮಾಣವನ್ನು ಶೇ 1ಕ್ಕಿಂತ ಕಡಿಮೆಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಗುರುವಾರ ತಿಳಿಸಿದರು.

ರಾಜ್ಯಸಭೆಯಲ್ಲಿ ಚರ್ಚೆ ವೇಳೆ ಪ್ರತಿಕ್ರಿಯೆ ನೀಡಿದ ಸಚಿವರು‌, ‘ಭಾರತದಲ್ಲಿ ಗುಣಮುಖ ಹೊಂದುವವರ ಪ್ರಮಾಣ ಶೇ78–79ರಷ್ಟಿದ್ದು, ಇದು ವಿಶ್ವದಲ್ಲೇ ಅಧಿಕ. ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 50 ಲಕ್ಷ ದಾಟಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ 20ಕ್ಕಿಂತ ಕಡಿಮೆ ಇದೆ’ ಎಂದರು.

‘ಯುರೋಪ್‌ನಲ್ಲಿ ಇರುವ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್‌ನಿಂದ ಉಂಟಾಗಿರುವ ಸಾವಿನ ಸಂಖ್ಯೆ ಕಡಿಮೆ ಇದೆ. ಕೋವಿಡ್‌–19 ಪರೀಕ್ಷೆ ಪ್ರಮಾಣವೂ ಶೀಘ್ರದಲ್ಲೇ ಅಮೆರಿಕಕ್ಕಿಂತ ಅಧಿಕವಾಗಲಿದೆ’ ಎಂದರು.

ADVERTISEMENT

ಶೇ 3 ಜನಸಂಖ್ಯೆಯಲ್ಲಿ ಕೋವಿಡ್‌–19:ಬುಡಕಟ್ಟು ಜನರೇ ಅತ್ಯಧಿಕವಾಗಿರುವ ದೇಶದ 177 ಜಿಲ್ಲೆಗಳಲ್ಲಿ ಒಟ್ಟು ಜನಸಂಖ್ಯೆಯ ಶೇ 3ರಷ್ಟು ಜನರಲ್ಲಿ ಮಾತ್ರ ಕೋವಿಡ್‌–19 ದೃಢಪಟ್ಟಿದೆ ಎಂದು ಸರ್ಕಾರ ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

‘ಬುಡಕಟ್ಟು ಪ್ರದೇಶದಲ್ಲಿ ಪಿಡುಗು ಹೆಚ್ಚಾಗಿ ವ್ಯಾಪಿಸಿದ ವರದಿ ಇಲ್ಲಿಯವರೆಗೂ ದಾಖಲಾಗಿಲ್ಲ’ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ ತಿಳಿಸಿದರು. ‘ಐಐಟಿ ದೆಹಲಿ ನಡೆಸಿರುವ ಅಧ್ಯಯನದ ಅನ್ವಯ ಶೇ 25 ಅಥವಾ ಅದಕ್ಕಿಂತ ಹೆಚ್ಚು ಬುಡಕಟ್ಟು ಜನರು ವಾಸಿಸುವ ದೇಶದ 177 ಜಿಲ್ಲೆಗಳ ಜನಸಂಖ್ಯೆಯಲ್ಲಿ ಶೇ 3ರಷ್ಟು ಜನರಲ್ಲಿ ಮಾತ್ರ ಕೋವಿಡ್‌–19 ದೃಢಪಟ್ಟಿದೆ ಎನ್ನುವುದು ತಿಳಿದುಬಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.