ADVERTISEMENT

ಉಪನಗರ ರೈಲು ಸೇವೆಗಳನ್ನು ಆರಂಭಿಸುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರ ಮನವಿ

ಮೃತ್ಯುಂಜಯ ಬೋಸ್
Published 10 ಜೂನ್ 2020, 8:39 IST
Last Updated 10 ಜೂನ್ 2020, 8:39 IST
ಉಪನಗರ ರೈಲು ಸೇವೆ-ಸಾಂದರ್ಭಿಕ ಚಿತ್ರ
ಉಪನಗರ ರೈಲು ಸೇವೆ-ಸಾಂದರ್ಭಿಕ ಚಿತ್ರ   

ಮುಂಬೈ: ತುರ್ತು ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನರಿಗಾಗಿ ಉಪನಗರ ರೈಲು ಸೇವೆಗಳನ್ನು ಆರಂಭಿಸುವಂತೆ ಮಹಾರಾಷ್ಟ್ರ ಸರ್ಕಾರವು ಕೇಂದ್ರ ಹಾಗೂ ರೈಲ್ವೆ ಸಚಿವಾಲಯಕ್ಕೆ ಪುನಃ ಮನವಿ ಮಾಡಿದೆ.

ವಾಣಿಜ್ಯ ರಾಜಧಾನಿ ಮುಂಬೈ ಮತ್ತು ಮುಂಬೈ ಮಹಾನಗರ ಪ್ರದೇಶ ಸಂಪೂರ್ಣ ಉಪನಗರ ರೈಲು ಸೇವೆಗಳ ಮೇಲೆ ಅವಲಂಬಿತವಾಗಿದ್ದು, ಅದನ್ನು ನಗರದ ಜೀವಾಧಾರ ಎಂದೇ ಪರಿಗಣಿಸಲಾಗಿದೆ.

ಕೋವಿಡ್‌–19 ನಿಯಂತ್ರಿಸುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗಿದ್ದ ರಾಜ್ಯದಲ್ಲಿ ಸಡಿಲಿಕೆ ತರಲಾಗುತ್ತಿದೆ. ಚಟುವಟಿಕೆಗಳ ಪುನರಾರಂಭಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಯೋಜನೆ ರೂಪಿಸಿದ್ದಾರೆ. ಕೇಂದ್ರ ರೈಲ್ವೆ ಹಾಗೂ ಪಶ್ಚಿಮ ರೈಲ್ವೆ ಸೇವೆಗಳನ್ನು ಆರಂಭಿಸುವಂತೆ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ADVERTISEMENT

'ನರ್ಸ್‌ಗಳು, ವಾರ್ಡ್‌ ಬಾಯ್‌ಗಳು ಸೇರಿದಂತೆ ತುರ್ತು ಸೇವೆಗಳಲ್ಲಿ ನಿರತರಾಗಿರುವವರಿಗೆ ರೈಲು ಸೇವೆ ಪುನರಾರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ' ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್‌ ಪರಾಬ್‌ ಹೇಳಿದ್ದಾರೆ.

'ಅಗತ್ಯ ಸೇವೆಗಳಿಗಾಗಿ ಮೋದಿ ಸರ್ಕಾರ ಉಪನಗರ ರೈಲು ಸಂಚಾರ ಕೂಡಲೇ ಆರಂಭಿಸಲು ಅವಕಾಶ ಮಾಡಿಕೊಡಬೇಕು. ದೂರದೂರುಗಳಿಂದ ಬರುವುದರಿಂದ ಮುಂಬೈನ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗುತ್ತಿದೆ. ಜೀವ ಉಳಿಸುವವರಿಗೆ ಅಗತ್ಯ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅವರಿಗೆಲ್ಲ ಪ್ರಯಾಣಿಸಲು ರೈಲು ಸೇವೆ ಅತ್ಯಗತ್ಯವಾಗಿದೆ' ಎಂದು ರಾಜ್ಯ ವಸತಿ ಸಚಿವ ಡಾ.ಜಿತೇಂದ್ರ ಔಹಾದ್ ಹೇಳಿದ್ದಾರೆ.

ಮುಂಬೈ ಉಪನಗರ ರೈಲು ಸೇವೆಯನ್ನು ನಿತ್ಯ 80 ಲಕ್ಷಕ್ಕೂ ಹೆಚ್ಚು ಜನರು ಬಳಸುತ್ತಾರೆ. 390 ಕಿ.ಮೀ ಹಾಗೂ 157 ನಿಲ್ದಾಣಗಳು, ಆರು ಮಾರ್ಗಗಳಲ್ಲಿ ಉಪನಗರ ರೈಲು ಸಂಚಾರ ವಿಸ್ತರಿಸಿಕೊಂಡಿದೆ. ಕೇಂದ್ರ ಮತ್ತು ಪಶ್ಚಿಮ ರೈಲು ವಲಯಗಳಿಂದ ನಿತ್ಯ 3,029 ಬಾರಿ ರೈಲು ಸಂಚಾರ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.