ಪಟ್ನಾ (ಪಿಟಿಐ): ಕೊರೊನಾ ವೈರಸ್ ಸೋಂಕು ಹರಡದಂತೆ ಭಾನುವಾರ ‘ಜನತಾ ಕರ್ಫ್ಯೂ’ ಆಚರಣೆಯಿಂದ ಮನೆಗಳಲ್ಲಿದ್ದ ವಿದ್ಯಾರ್ಥಿಗಳಿಗೆ ‘ಸೂಪರ್ 30’ ಸ್ಥಾಪಕ ಆನಂದ್ ಕುಮಾರ್ ಗಣಿತ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವಂತೆ ಸೂಚಿಸಿ, ಕರ್ಫ್ಯೂ ನಡುವೆಯೂ ವಿದ್ಯಾರ್ಥಿಗಳನ್ನು ಓದಿನಲ್ಲಿ ಸಕ್ರಿಯರಾಗಿರುವಂತೆ ಮಾಡಿದ್ದಾರೆ.
6ರಿಂದ 12 ತರಗತಿ ವಿದ್ಯಾರ್ಥಿಗಳಿಗೆ ಟ್ವಿಟರ್ ಹಾಗೂ ಫೇಸ್ಬುಕ್ ಪುಟಗಳಲ್ಲಿ ಪ್ರಶ್ನೆ ಹಾಕಿ, ಅವುಗಳನ್ನು ಪರಿಹರಿ
ಸುವಂತೆ ಅವರುಭಾನುವಾರ ಸೂಚಿಸಿದ್ದರು.
‘ಪ್ರಶ್ನೆ ಕೇಳಿದ ಗಂಟೆಯಲ್ಲೇ ನೂರಾರು ವಿದ್ಯಾರ್ಥಿಗಳು ಉತ್ತರಿಸಿದ್ದಾರೆ. ಹಲವರು ವಿವಿಧ ರೂಪಗಳಲ್ಲಿ ಪರಿಹಾರ ಸೂಚಿಸಿದ್ದಾರೆ. ಕಠಿಣವಾದ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರ ಕಂಡುಹಿಡಿಯಲು ಕೆಲವು ಸಲಹೆಗಳನ್ನೂ ನೀಡಿದ್ದೆ. ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಇಷ್ಟವಾಗಿವೆ. ಇಂತಹ ಪ್ರಶ್ನೆಗಳನ್ನು ಇನ್ನಷ್ಟು ನೀಡುವಂತೆಯೂ ಅವರು ಕೇಳಿಕೊಂಡರು’ ಎಂದು ಕುಮಾರ್ ತಿಳಿಸಿದ್ದಾರೆ.
‘ಸದಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಬೇಕೆಂಬ ಬಯಕೆ. ಇಂಥ ಸಮಯವನ್ನು ಅವರು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ನನ್ನ ಉದ್ದೇಶ’ ಎಂದು ಅವರು ಹೇಳಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಶಾಲಾ–ಕಾಲೇಜುಗಳು ಬಂದ್ ಆಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.