ನವದೆಹಲಿ: ದೆಹಲಿಯ ದ್ವಾರಕಾದ ಸೆಕ್ಟರ್–16ರಲ್ಲಿರುವ ಕ್ವಾರಂಟೈನ್ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿಗಳನ್ನು ಪಕ್ಕದ ಪ್ರದೇಶಗಳಿಗೆ ತೂರಿದ್ದಾರೆ. ಈ ಘಟನೆಯ ಸಂಬಂಧ ಇನ್ನೂ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಬುಧವಾರ ಪೊಲೀಸರು ಹೇಳಿದ್ದಾರೆ.
ಕ್ವಾರಂಟೈನ್ ಕೇಂದ್ರದಿಂದ ಮೂತ್ರ ತುಂಬಿದ ಬಾಟಲಿ ಎಸೆದಿರುವ ಬಗ್ಗೆ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ (DUSIB)ಸಿಬ್ಬಂದಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ಸಂಬಂಧ ಮಂಗಳವಾರ ಎಫ್ಐಆರ್ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ಸಿಬ್ಬಂದಿ ಕ್ವಾರಂಟೈನ್ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
'ದ್ವಾರಕಾದ ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ಫ್ಲಾಟ್ 16 ಬಿ ಕ್ವಾರಂಟೈನ್ ಕೇಂದ್ರದಲ್ಲಿ ನಿಯೋಜನೆಗೊಂಡಿದ್ದ ನಾಗರಿಕ ರಕ್ಷಣಾ ಸಿಬ್ಬಂದಿ ಘಟನೆ ಸಂಬಂಧ ಮಂಗಳವಾರ ಸಂಜೆ 6ಕ್ಕೆ ಪೊಲೀಸರಿಗೆ ದೂರು ನೀಡಿದ್ದರು. ಪಂಪ್ ಹೌಸ್ ಸಮೀಪ ಮೂತ್ರ ತುಂಬಿದ ಎರಡು ಬಾಟಲಿಗಳನ್ನು ಎಸೆಯಲಾಗಿದೆ. ಅವುಗಳನ್ನು ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳೇ ತೂರಿದ್ದಾರೆ ಎಂದು ಶಂಕಿಸಲಾಗಿದ್ದು, ಎಫ್ಐಆರ್ ದಾಖಲಾಗಿಸಲಾಗಿದೆ.
ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ನಲ್ಲಿ ಫ್ಲಾಟ್ ನಂಬರ್ಗಳನ್ನು ದಾಖಲಿಸಲಾಗಿದ್ದು, ಅಲ್ಲಿರುವವರೇ ಈ ಕೃತ್ಯವೆಸಗಿರುವುದಾಗಿ ಶಂಕಿಸಲಾಗಿದೆ. ಮೂತ್ರ ತುಂಬಿದ ಬಾಟಲಿಗಳನ್ನು ಎಸೆದುಇತರೆ ಜನರಿಗೆ ಕೊರೊನಾ ಸೋಂಕು ಹರಡುವ ಉದ್ದೇಶದಿಂದ ಹೀಗೆ ಮಾಡಿರಬಹುದು ಎಂದೂ ಉಲ್ಲೇಖಿಸಲಾಗಿದೆ.
ಇತ್ತೀಚೆಗಷ್ಟೇತಬ್ಲೀಗ್ ಜಮಾತ್ನ ಸದಸ್ಯರು ದೆಹಲಿಯ ಕ್ವಾರಂಟೈನ್ ಸೆಂಟರ್ನ ಕೊಠಡಿಯ ಮುಂಭಾಗದಲ್ಲೇ ಮಲವಿಸರ್ಜನೆ ಮಾಡಿದ್ದರು.ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.