ADVERTISEMENT

1947ರ ನಂತರ ಅಸ್ಸಾಂ ಅಭಿವೃದ್ಧಿ ಕಡೆಗಣನೆ: ಪ್ರಧಾನಿ ಆರೋಪ

ಪಿಟಿಐ
Published 18 ಫೆಬ್ರುವರಿ 2021, 12:33 IST
Last Updated 18 ಫೆಬ್ರುವರಿ 2021, 12:33 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ಗುವಾಹಟಿ: ‘ಅಸ್ಸಾಂ ರಾಜ್ಯವನ್ನು ಕಡೆಗಣಿಸಿರುವ ಚಾರಿತ್ರಿಕ ಪ್ರಮಾದವನ್ನು ನನ್ನ ನೇತೃತ್ವದ ಸರ್ಕಾರ ಸರಿಪಡಿಸಲಿದೆ. ರಾಜ್ಯದ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಸ್ತಿತ್ವದಲ್ಲಿದ್ದರೆ, ರಾಜ್ಯ ಮತ್ತು ದೇಶದ ಇತರೆ ಭಾಗಗಳ ನಡುವಣ ಸಾಂಸ್ಕೃತಿಕ ಮತ್ತು ಭೌಗೋಳಿಕ ಅಂತರವು ಕುಗ್ಗಲೂ ನೆರವಾಗಲಿದೆ ಎಂದೂ ಅವರು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಅಸ್ಸಾಂನಲ್ಲಿ ತಲಾ ಆದಾಯ ಹೆಚ್ಚಿತ್ತು. ಆದರೆ, 1947ರ ನಂತರ ರಾಜ್ಯದ ಅಭಿವೃದ್ಧಿ ಕಡೆಗಣಿಸಲಾಯಿತು. ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಕೆಲಸ ವಾಜಪೇಯಿ ಅವರು ಪ್ರಧಾನಿಯಾದ ನಂತರ ಶುರುವಾಯಿತು. ತಮ್ಮ ನೇತೃತ್ವದ ಸರ್ಕಾರ ಇದನ್ನು ಆದ್ಯತೆಯಾಗಿ ಪರಿಗಣಿಸಿದೆ ಎಂದೂ ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ₹ 3,231 ಕೋಟಿ ಅಂದಾಜು ವೆಚ್ಚದ ‘ಮಹಾಬಾಹು ಬ್ರಹ್ಮಪುತ್ರ’ ಯೋಜನೆಗೆ ಚಾಲನೆ ನೀಡಿದರು. ಜೋಗಿಗೋಪಾ ಬಳಿ ಒಳನಾಡು ಟರ್ಮಿನಲ್‌ ಮತ್ತು ಪಂಡು, ಜೋಗಿಗೋಪಾ, ನೀಮತಿ, ಬಿಸ್ವನಾಥ್ ಘಾಟ್ ಬಳಿ ಪ್ರವಾಸಿ ತಾಣ ಅಭಿವೃದ್ಧಿ ಉದ್ದೇಶಿತ ಯೋಜನೆಯ ಭಾಗವಾಗಿದೆ.

ಮಹಾಬಾಬು ಬ್ರಹ್ಮಪುತ್ರ ಯೋಜನೆಯಡಿ ರಾಜ್ಯ, ದೇಶದ ಇತರೆ ಭಾಗದ ಜೊತೆಗೆ ಸಂಪರ್ಕ ಕಲ್ಪಿಸಲು ನೀರಿನೊಳಗಡೆ ಮಾರ್ಗ ಅಭಿವೃದ್ಧಿಪಡಿಸಲಾಗುವುದು ಎಂದರು. ಇದೇ ಸಂದರ್ಭ ಅತಿದೊಡ್ಡದಾದ, 19 ಕಿ.ಮೀ. ಉದ್ದದ ಸೇತುವೆ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.