ನವದೆಹಲಿ: ಕೇಂದ್ರ ಸರ್ಕಾರ ತೈಲ ಮಾರಾಟದಿಂದ ಸಂಗ್ರಹಿಸಿರುವ ತೆರಿಗೆ ಹಣದಲ್ಲಿ, ದೇಶಕ್ಕೆ ಬೇಕಾಗಿರುವ ಕೋವಿಡ್ ಲಸಿಕೆ ಖರೀದಿ ಸೇರಿದಂತೆ, ಅನೇಕ ಸೌಲಭ್ಯಗಳನ್ನು ಕಲ್ಪಿಸಬಹುದಿತ್ತು. ಆದರೆ, ಇಲ್ಲಿವರೆಗೂ ಏನೂ ಮಾಡಿಲ್ಲ‘ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ತೈಲ ಬೆಲೆ ಇಳಿಕೆಗೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಸಾಂಕೇತಿಕವಾಗಿ ನಗರದ ವಿವಿಧ ಪೆಟ್ರೊಲ್ ಬಂಕ್ಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ‘ಈ ಸಾಂಕ್ರಾಮಿಕ ರೋಗದ ಕಾಲದಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ₹2.74 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುತ್ತಿದೆ‘ ಎಂದು ಉಲ್ಲೇಖಿಸಿದ್ದಾರೆ.
‘ಈ ತೆರಿಗೆ ಹಣದಿಂದ ದೇಶಕ್ಕೆ ಬೇಕಾಗುವಷ್ಟು ಲಸಿಕೆ ಖರೀದಿಸಬಹುದು (₹67ಸಾವಿರ ಕೋಟಿ) ಅಲ್ಲದೆ 718 ಜಿಲ್ಲೆಗಳಲ್ಲಿ ಆಮ್ಲಜನಕ ಘಟಕಗಳನ್ನು ಆರಂಭಿಸಬಹುದು. 29 ರಾಜ್ಯಗಳಲ್ಲಿ ಎಐಐಎಂಎಸ್ ಆಸ್ಪತ್ರೆ ಆರಂಭಿಸಬಹುದು. 25 ಕೋಟಿ ಬಡ ಜನರಿಗೆ ತಲಾ ₹6ಸಾವಿರದಂತೆ ಆರ್ಥಿಕ ನೆರವು ನೀಡಬಹುದು. ಆದರೆ, ಇಲ್ಲಿವರೆಗೂ ಈ ಸರ್ಕಾರ ಯಾವುದನ್ನೂ ಮಾಡಿಲ್ಲ‘ ಎಂದು 'BJPLootingIndia' ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.