ಲಖನೌ: ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಮಧ್ಯಪ್ರದೇಶ ಬಿಜೆಪಿ ನಾಯಕ ಹಾಗೂ ಸಚಿವ ವಿಜಯ್ ಶಾ ವಿರುದ್ಧ ಬಿಜೆಪಿಯು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಆಗ್ರಹಿಸಿದರು.
ಸೇನೆಯ ಅಧಿಕಾರಿಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ವಿರುದ್ಧ ಕೇವಲ ಎಫ್ಐಆರ್ ಅಷ್ಟೇ ಅಲ್ಲ, ಸರಿಯಾದ ಶಿಕ್ಷೆಯಾಗಬೇಕು ಎಂದು ದೇಶದ ಜನರು ಕಾಯುತ್ತಿದ್ದಾರೆ ಎಂದರು.
'ಆಪರೇಷನ್ ಸಿಂಧೂರ' ಕುರಿತು ಜಗತ್ತಿಗೆ ತಿಳಿಸಿದ ಮುಸ್ಲಿಂ ಸಮುದಾಯದ ಮಹಿಳಾ ಸೇನಾಧಿಕಾರಿಯ ಕುರಿತು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ಬಿಜೆಪಿ ಸಚಿವ ವಿಜಯ್ ಶಾ ಹೇಳಿಕೆಯು, ಸೇನೆಯ ಶೌರ್ಯಕ್ಕೆ ನಾವು ಮಾಡುವ ಅವಮಾನ ಎಂದು ಹೇಳಿದರು.
ದೇಶದಲ್ಲಿ ಕೋಮುವಾದ, ಜಾತಿ ಜಾತಿಗಳ ನಡುವಿನ ಸಂಘರ್ಷ, ಅಶಾಂತಿ ಹೆಚ್ಚಾಗಿದೆ. ಇದು ದೇಶದ ಪ್ರಗತಿಗೆ ಮಾರಕ ಎಂದು ಕಿಡಿಕಾರಿದರು.
ಕಾರ್ಯಕ್ರಮವೊಂದರಲ್ಲಿ 'ಆಪರೇಷನ್ ಸಿಂಧೂರ' ಕುರಿತು ಮಾತನಾಡುವಾಗ, ಕರ್ನಲ್ ಸೋಫಿಯಾ ಅವರನ್ನು 'ಭಯೋತ್ಪಾದಕರ ಸಹೋದರಿ' ಎಂಬಂತಹ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂಬ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟ್, ಶಾ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ಇದನ್ನು ಪ್ರಶ್ನಿಸಿ, ಸಚಿವ ವಿಜಯ್ ಶಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಶಾ 'ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ, ನಾನು ಕ್ಷಮೆಯಾಚಿಸುತ್ತೇನೆ. ಕರ್ನಲ್ ಖುರೇಷಿ ಅವರನ್ನು ನನ್ನ ಸಹೋದರಿಗಿಂತಲೂ ಹೆಚ್ಚು ಗೌರವಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.