ADVERTISEMENT

ಪಾಲ್ಘರ್‌ ಗಲಭೆ ಪ್ರಕರಣ: 89 ಮಂದಿ ಆರೋಪಿಗಳಿಗೆ ಜಾಮೀನು

ಪಿಟಿಐ
Published 16 ಜನವರಿ 2021, 14:07 IST
Last Updated 16 ಜನವರಿ 2021, 14:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಠಾಣೆ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕಳೆದ ವರ್ಷದ ಏಪ್ರಿಲ್‌ನಲ್ಲಿ ನಡೆದಿದ್ದ ಗುಂಪು ಹಲ್ಲೆ ಪ್ರಕರಣದ 89 ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿದೆ.

ಪಾಲ್ಘರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಸಾಧುಗಳು ಹಾಗೂ ಅವರ ಕಾರಿನ ಚಾಲಕನನ್ನು ನೂರಾರು ಜನ ದೊಣ್ಣೆಗಳಿಂದ ಹೊಡೆದು ಕೊಂದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಎಸ್‌.ಬಿ.ಬಹಲ್ಕರ್‌ ಅವರು ಆರೋಪಿಗಳಿಗೆ ಜಾಮೀನು ನೀಡಿ, ವಿಚಾರಣೆಯನ್ನು ಫೆಬ್ರುವರಿ 15ಕ್ಕೆ ಮುಂದೂಡಿದರು.

ADVERTISEMENT

‘ಗಲಭೆಯಲ್ಲಿ ನಮ್ಮ ಕಕ್ಷಿದಾರರ ಪಾತ್ರವೇನೂ ಇಲ್ಲ. ಪೊಲೀಸರು ಕೇವಲ ಅನುಮಾನದ ಮೇಲೆ ಅವರನ್ನು ಬಂಧಿಸಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲರಾದ ಅಮೃತ್‌ ಅಧಿಕಾರಿ ಮತ್ತು ಅತುಲ್‌ ಪಾಟೀಲ್‌ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಮೂರು ಎಫ್‌ಐಆರ್‌ಗಳ ಸಿಂಧುತ್ವವನ್ನೂ ಆರೋಪಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 201 ಮಂದಿಯನ್ನು ಬಂಧಿಸಿದ್ದರು. ಈ ಪೈಕಿ 75 ಮಂದಿ ಮುಖ್ಯ ಆರೋಪಿಗಳನ್ನು ಜೈಲಿಗೆ ಅಟ್ಟಲಾಗಿತ್ತು.

ಫಿರ್ಯಾದಿಯ (ಪ್ರಾಸಿಕ್ಯೂಷನ್‌) ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸತೀಶ್‌ ಮಾಣೆಶಿಂಧೆ ಹಾಗೂ ಮೃತ ಸಾಧುಗಳ ಕುಟುಂಬದ ಪರ ವಕೀಲ ಪಿ.ಎನ್‌.ಓಜಾ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.